ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಿಂತಿದ್ದ ಸರ್ಕಾರಿ ಬಸ್ನೊಳಗೆ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಶಂಕಿತ ಆರೋಪಿಯನ್ನು 36 ವರ್ಷದ ದತ್ತಾತ್ರೇಯ ರಾಮದಾಸ್ ಗಾಡೆ ಎಂದು ಗುರುತಿಸಲಾಗಿದ್ದು, ಅವನ ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈತ ಈ ಹಿಂದೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲು ಸೇರಿ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದ. ಅತ್ಯಾಚಾರವೆಸಗಿದ ಬಳಿಕ ರಾಮ್ದಾಸ್ ತನ್ನ ಗುರುತನ್ನು ಮರೆಮಾಚಲು ಮಾಸ್ಕ್ ಧರಿಸಿಕೊಂಡು ಹೋಗಿದ್ದ. ಆತನನ್ನು ಬಂಧಿಸಲು ಪುಣೆ ಅಪರಾಧ ವಿಭಾಗವು 13 ತಂಡಗಳನ್ನು ನಿಯೋಜಿಸಿದ್ದು, ಇವರಿಗೆ ಶ್ವಾನದಳವೂ ಸಾಥ್ ನೀಡಲಿದೆ. ಅಲ್ಲದೆ, ಆರೋಪಿ ರಾಮ್ದಾಸ್ ಬಗ್ಗೆ ಮಾಹಿತಿ ನೀಡುವವರಿಗೆ ಪೊಲೀಸರು 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ.
ಮಂಗಳವಾರ ಮುಂಜಾನೆ ಪುಣೆಯ ಸ್ವರ್ಗೇಟ್ ಡಿಪೋದಲ್ಲಿ ನಿಂತಿದ್ದ ರಾಜ್ಯ ಸಾರಿಗೆ ಬಸ್ನಲ್ಲಿ 26 ವರ್ಷದ ಯುವತಿಯ ಮೇಲೆ ರಾಮ್ದಾಸ್ ಅತ್ಯಾಚಾರ ನಡೆಸಿ, ಅಲ್ಲಿಂದ ಪರಾರಿಯಾಗಿದ್ದ. ಕ್ರಿಮಿನಲ್ ಹಿನ್ನೆಲೆಯುಳ್ಳ ರಾಮ್ದಾಸ್ ಗಾಡೆ ವಿರುದ್ಧ ಶಿರೂರು, ಶಿಕ್ರಾಪುರ ಮತ್ತು ಸ್ವರ್ಗೇಟ್ ಪೊಲೀಸ್ ಠಾಣೆಗಳಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಅತ್ಯಾಚಾರ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪುಣೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
“ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಡೆದ ಅತ್ಯಾಚಾರ ಘಟನೆಯು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಇದೊಂದು ನಾಚಿಕೆಗೇಡಿನ ಸಂಗತಿ. ಆರೋಪಿಯದ್ದು ಕ್ಷಮಿಸಲಾಗದ ಅಪರಾಧ. ಅವನಿಗೆ ಮರಣದಂಡನೆ ವಿಧಿಸುವುದೇ ಸೂಕ್ತ. ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ನಾನು ಪುಣೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ” ಎಂದು ಪವಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಈ ಘಟನೆ ಬಗ್ಗೆ ಪರಿಶೀಲಿಸುತ್ತಿದ್ದು, ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ಪವಾರ್ ಹೇಳಿದ್ದಾರೆ.
ಸಂತ್ರಸ್ತೆಗೆ ನ್ಯಾಯ, ಮಾನಸಿಕ ಬೆಂಬಲ ಮತ್ತು ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಏನಿದು ಘಟನೆ?
ಮಂಗಳವಾರ ಬೆಳಗ್ಗೆ 5.45ರ ಸುಮಾರಿಗೆ ಸತಾರಾ ಜಿಲ್ಲೆಯ ಫಲ್ತಾನ್ಗೆ ತೆರಳಲು ನಾನು ಬಸ್ ಗಾಗಿ ಕಾಯುತ್ತಿದ್ದೆ. ಅಲ್ಲಿಗೆ ಬಂದ ಆರೋಪಿಯು, ನನ್ನನ್ನು ಸಮೀಪಿಸಿ ‘ದೀದಿ’ (ಸಹೋದರಿ) ಎಂದು ಕರೆಯುತ್ತಾ ಮಾತು ಆರಂಭಿಸಿದ. ಸತಾರಾಗೆ ಹೋಗುವ ಬಸ್ ಮತ್ತೊಂದು ಪ್ಲಾಟ್ ಫಾರ್ಮ್ ಗೆ ಬಂದಿದೆ ಎಂದು ಹೇಳಿದ. ನಾನು ನಂಬಿ ಆತನನ್ನು ಹಿಂಬಾಲಿಸಿದೆ. ಡಿಪೋದಲ್ಲಿ ನಿಂತಿದ್ದ ‘ಶಿವ್ ಶಾಹಿ’ ಎಂಬ ಎಸಿ ಬಸ್ ನೊಳಕ್ಕೆ ಬರುವಂತೆ ಹೇಳಿದ. ಆದರೆ ಬಸ್ಸಿನೊಳಗೆ ಲೈಟ್ ಗಳು ಉರಿಯುತ್ತಿರಲಿಲ್ಲ. ಹೀಗಾಗಿ ಒಳಗೆ ಹೋಗಲು ನಾನು ಹಿಂದೇಟು ಹಾಕಿದೆ. ಆದರೆ ಆ ವ್ಯಕ್ತಿ, “ಹೆದರಬೇಕಾಗಿಲ್ಲ, ಇದುವೇ ಸತಾರಾಗೆ ಹೋಗುವ ಬಸ್ಸು” ಎಂದು ಹೇಳಿ ಹತ್ತಿಸಿಕೊಂಡ. ಒಳಗೆ ಪ್ರವೇಶಿಸುತ್ತಲೇ ಆತ ನನ್ನ ಮೇಲೆ ಅತ್ಯಾಚಾರವೆಸಗಿದ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.