ಚಿಕ್ಕಬಳ್ಳಾಪುರ: ನಗರಸಭೆ ಹರಾಜು ಪ್ರಕ್ರಿಯೆ ಮುಂದೂಡಿದ್ದಕ್ಕೆ ಗರಂ ಆದ ಜನರು, ನಗರಸಭೆ ಪೌರಾಯುಕ್ತ, ಅಧ್ಯಕ್ಷರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ ನಗರಸಭೆ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಪೌರಾಯುಕ್ತರು ಏಕಾಏಕಿ ಮುಂದೂಡಿದ್ದಾರೆ. ಗುರುವಾರ ಮಾಡುವುದಾಗಿ ಹೇಳಿದರೂ ಜನರು ಬಿಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಷ್ಟೇ ಹೊತ್ತಾದರೂ ಇವತ್ತೇ ನಡೆಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ನಗರಸಭೆ ಪೌರಾಯುಕ್ತ, ಅಧ್ಯಕ್ಷರೊಂದಿಗೆ ಜನರು ಮಾತಿನ ಚಕಮಕಿ ನಡೆಸಿದ್ದಾರೆ. ಪೌರಾಯುಕ್ತ ಮನ್ಸೂರ್ ಅಲಿ ಖಾನ್, ಅಧ್ಯಕ್ಷ ಗಜೇಂದ್ರ ನೇತೃತ್ವದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ 99 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು.