ನವದೆಹಲಿ : ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI) ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆಯೊಂದರಲ್ಲಿ ಕೇಳಲಾದ ವಿವಾದಾತ್ಮಕ ಪ್ರಶ್ನೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಪ್ರೊಫೆಸರ್ವೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಬಿಎ (ಆನರ್ಸ್) ಸೋಷಿಯಲ್ ವರ್ಕ್ ವಿಭಾಗದ ಮೊದಲ ಸೆಮಿಸ್ಟರ್ನ ‘ಸೋಷಿಯಲ್ ಪ್ರಾಬ್ಲಮ್ಸ್ ಇನ್ ಇಂಡಿಯಾ’ (ಭಾರತದಲ್ಲಿನ ಸಾಮಾಜಿಕ ಸಮಸ್ಯೆಗಳು) ವಿಷಯದ ಪರೀಕ್ಷೆಯಲ್ಲಿ, “ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲಿನ ದೌರ್ಜನ್ಯಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ಬರೆಯಿರಿ,” ಎಂದು 15 ಅಂಕಗಳಿಗೆ ಪ್ರಶ್ನೆ ಕೇಳಲಾಗಿತ್ತು. ಪ್ರೊಫೆಸರ್ ವೀರೇಂದ್ರ ಬಾಲಾಜಿ ಸಹಾರೆ ಅವರು ಈ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿದ್ದರು ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ |
ಈ ಪ್ರಶ್ನೆ ಪತ್ರಿಕೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ವಿಶ್ವವಿದ್ಯಾಲಯದ ವಿರುದ್ಧ ಕಿಡಿಕಾರಿದ್ದರು. ಕೇಂದ್ರ ವಿಶ್ವವಿದ್ಯಾಲಯವೊಂದರಲ್ಲಿ ಕೋಮು ಭಾವನೆ ಕೆರಳಿಸುವಂತಹ ಮತ್ತು ರಾಜಕೀಯ ಪ್ರೇರಿತ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಅವರು ಕೂಡ, “ಇದೊಂದು ದುರುದ್ದೇಶಪೂರಿತ ಪ್ರಶ್ನೆ,” ಎಂದು ಟೀಕಿಸಿದ್ದಾರೆ.
ತನಿಖೆಗೆ ಸಮಿತಿ ರಚನೆ |
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಇದೊಂದು “ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಕೃತ್ಯ” ಎಂದು ಬಣ್ಣಿಸಿದೆ. ಸದ್ಯ ಪ್ರೊಫೆಸರ್ ವೀರೇಂದ್ರ ಅವರನ್ನು ಅಮಾನತುಗೊಳಿಸಲಾಗಿದ್ದು, ವಿಚಾರಣೆಗಾಗಿ ತನಿಖಾ ಸಮಿತಿಯನ್ನು ರಚಿಸಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅವರು ಅನುಮತಿಯಿಲ್ಲದೆ ದೆಹಲಿ ಬಿಟ್ಟು ಹೋಗುವಂತಿಲ್ಲ ಎಂದು ಆದೇಶಿಸಲಾಗಿದೆ.
ಎಫ್ಐಆರ್ ದಾಖಲಿಸಿಲ್ಲ
ಅಮಾನತು ಆದೇಶದಲ್ಲಿ ಪೊಲೀಸ್ ದೂರು (ಎಫ್ಐಆರ್) ದಾಖಲಿಸುವ ಬಗ್ಗೆ ಪ್ರಸ್ತಾಪವಿದ್ದರೂ, ನಂತರ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, “ಸದ್ಯಕ್ಕೆ ಪ್ರೊಫೆಸರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಉದ್ದೇಶವಿಲ್ಲ. ವಿಷಯವನ್ನು ಆಂತರಿಕವಾಗಿಯೇ ತನಿಖೆ ಮಾಡಲಾಗುತ್ತಿದೆ,” ಎಂದು ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ : ‘ಇನ್ಸ್ಟಾಗ್ರಾಮ್’ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ | ಆರೋಪಿ ಅರೆಸ್ಟ್



















