ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ತಾಯಿ ನಿಧನರಾಗಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಅ.20ರಂದು ಬೆಳಗ್ಗೆ ಸರೋಜಾ ಸಂಜೀವ್ ಅವರು ಸಾವನ್ನಪ್ಪಿದ್ದಾರೆ. ತಾಯಿಯನ್ನು ಕಳೆದುಕೊಂಡು ನೋವಿನಲ್ಲಿ ಇರುವ ಸುದೀಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ. ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ. ಆ ಪತ್ರದ ಪ್ರತಿಯನ್ನು ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಧನ್ಯವಾದ ಅರ್ಪಿಸಿದ್ದಾರೆ.
ನಿಮ್ಮ ತಾಯಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ತಿಳಿದು ನನಗೆ ತೀವ್ರ ನೋವಾಗಿದೆ. ತಾಯಿಯ ಅಗಲಿಕೆಯಿಂದ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಅವರ ಜೊತೆ ನಿಮಗೆ ಇದ್ದ ಬಾಂಧವ್ಯ ಹಾಗೂ ಅವರ ಪರಿಣಾಮ ನಿಮ್ಮ ಮೇಲೆ ಎಷ್ಟಿತ್ತು ಎಂಬುವುದನ್ನು ನಿಮ್ಮ ದುಃಖವೇ ಹೇಳುತ್ತಿದೆ. ನೆನಪುಗಳ ಮೂಲಕ ಅವರು ಶಾಶ್ವತವಾಗಿ ಇರಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ನಾನು ನಿಮಗೆ ಸಂತಾಪ ಸೂಚಿಸುತ್ತೇನೆ. ನಿಮಗಾಗಿ ಮತ್ತು ನಿಮ್ಮ ಹಿತೈಷಿಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ನೋವನ್ನು ಭರಿಸುವ ಶಕ್ತಿ ನಿಮಗೆ ಸಿಗಲಿ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದಲ್ಲಿ ಬರೆದಿದ್ದಾರೆ.