ಬೆಂಗಳೂರು: ಬಿಜೆಪಿಯಲ್ಲಿ ಅತೃಪ್ತರೆಂದು ಹೇಳಲಾಗುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹಾಗೂ ಕುಮಾರ್ ಬಂಗಾರಪ್ಪ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್ ಬೋರ್ಡ್ (Waqf Board) ನೋಟಿಸ್ ನೀಡಿದೆ. ಈ ವಿಚಾರವಾಗಿ ನವೆಂಬರ್ 25 ರಿಂದ ಡಿಸೆಂಬರ್ 25ರ ವರೆಗೆ ಒಂದು ತಿಂಗಳುಗಳ ಕಾಲ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ (BJP) ನಿರ್ಧರಿಸಿದೆ ಎಂದು ಹೇಳಿದ್ದಾರೆ.
ವಕ್ಪ್ ಸಮಸ್ಯೆ ಎದುರಾಗಿರುವವರಿಗೆ ಮಾಹಿತಿ ನೀಡಲು ವಾರ್ ರೂಂ ಸ್ಥಾಪಿಸುತ್ತಿದ್ದೇವೆ. ಸಮಸ್ಯೆಗೆ ಸಿಲುಕಿದವರು 9035675734 ವಾಟ್ಸಪ್ ನಂಬರಿಗೆ ದೂರು ನೀಡಬಹುದು. ನಮ್ಮ ಯಾವುದೇ ನಾಯಕರನ್ನೂ ಭೇಟಿ ಮಾಡಿ ಮಾಹಿತಿ ಪಡೆಯಲು ಅವಕಾಶವಿದೆ. ನವೆಂಬರ್ 25 ರಿಂದ ಈ ಜಾಥಾ ಆರಂಭವಾಗಲಿದೆ. ಶಾಸಕ ಬಸನಗೌಟ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್, ಅಣ್ಣಾ ಸಾಹೇಬ್ ಜೊಲ್ಲೆ ಸೇರಿದಂತೆ ಹಲವರು ಜಾಥಾದಲ್ಲಿರಲಿದ್ದಾರ ಎಂದು ಹೇಳಿದ್ದಾರೆ.
ಅಲ್ಲದೇ, ಈ ವೇಳೆ 1954 ರಿಂದ ರಚನೆಯಾಗಿರುವ ವಕ್ಪ್ ಸಂಬಂಧಿತ ಗೆಜೆಟ್ ಗಳನ್ನು ರದ್ದು ಮಾಡಬೇಕು. ರೈತರು, ದೇವಸ್ಥಾನ ಸೇರಿದಂತೆ ವಕ್ಫ್ ಸ್ವಾಧೀನಕ್ಕೆ ಪ್ರಯತ್ನಿಸುತ್ತಿರುವ ಜಾಗಗಳನ್ನು ಶಾಶ್ವತವಾಗಿ ಬಿಟ್ಟು ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸಬೇಕೆಂದು ಸರ್ಕಾರದ ಮುಂದೆ ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವಕ್ಫ್ ನ್ಯಾಯಾಧಿಕರಣ ರದ್ದಾಗಬೇಕು. ರಾಜ್ಯದಲ್ಲಿ 6.70 ಲಕ್ಷ ಎಕರೆ ವಕ್ಫ್ ಆಸ್ತಿ ಎಂದು ಸ್ವಾಧೀನ ಮಾಡಿಕೊಳ್ಳಲು ಯತ್ನಿಸಲಾಗುತ್ತಿದೆ. ಹೀಗಾಗಿ ರಾಜ್ಯದ ರೈತರಿಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದಿದ್ದಾರೆ.
ನಮ್ಮ ಸಮುದಾಯದ ರಕ್ಷಣೆ ಮಾಡಬೇಕು. ನೋಟೀಸ್ ಕೊಟ್ಟಿದ್ದು ಅಷ್ಟೇ ಅಲ್ಲ, ನೋಟೀಸ್ ಕೊಡದೇ ವಕ್ಫ್ ಎಂದು ಪಹಣಿಯಲ್ಲಿ ನಮೂದು ಮಾಡಿದ್ದಾರೆ. ಬಿಜೆಪಿ ಪಕ್ಷದ ಅಡಿಯಲ್ಲಿ ಹೋರಾಟ ಮಾಡುತ್ತೇವೆ. ನೇರವಾಗಿ ಕೇಂದ್ರ ಸಚಿವರು ಹೋರಾಟಕ್ಕೆ ಬಂದಿದ್ದರು. ಕೇಂದ್ರ ಸರ್ಕಾರ ಬೆಂಬಲಕ್ಕೆ ಇದೆ ಎಂದಿದ್ದಾರೆ.