ಬೆಂಗಳೂರು: ಬಿಜೆಪಿಯಲ್ಲಿ ಕೂಡ ಈಗ ಬಣ ರಾಜಕಾರಣ ಆರಂಭವಾಗಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯಾಧ್ಯಕ್ಷರ ವಿರುದ್ಧ ತೊಡೆ ತಟ್ಟಿದ್ದಾರೆ. ಹೀಗಾಗಿ ಬಿವೈ ವಿಜಯೇಂದ್ರ ಬಣ ಯತ್ನಾಳ್ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಯತ್ನಾಳ್ ಟೀಂ ವಕ್ಫ್ ವಿರೋಧಿ ಹೋರಾಟಕ್ಕೆ ಪರ್ಯಾಯವಾಗಿ ದಾವಣಗೆರೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಈ ವಿಷಯವಾಗಿ ಚರ್ಚೆ ನಡೆಸಲಾಯಿತು. ನಂತರ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ವೈ ಸಂಪಂಗಿ ಸೇರಿದಂತೆ ಹಲವರು ಯತ್ನಾಳ್ ವಿರುದ್ಧ ಗುಡುಗಿದರು.
ಎಂಪಿ ರೇಣುಕಾಚಾರ್ಯ ಮಾತನಾಡಿ, ಬಿವೈ ವಿಜಯೇಂದ್ರ ಅವರನ್ನು ನರೇಂದ್ರ ಮೋದಿ ಅಧ್ಯಕ್ಷರಾಗಿ ಮಾಡಿದ್ದಾರೆ. ಆದರೆ, ಹಲವರು ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಡಿಸೆಂಬರ್ ಅಂತ್ಯವಾಗುತ್ತೆ ಎಂದು ಹೇಳುತ್ತಿದ್ದಾರೆ. ವಿಜಯೇಂದ್ರ ವ್ಯಕ್ತಿ ಅಲ್ಲ, ಪಕ್ಷದ ಅಧ್ಯಕ್ಷರು. ಇವರನ್ನು ಪ್ರಶ್ನೆ ಮಾಡುವುದು ರಾಷ್ಟ್ರೀಯ ನಾಯಕರನ್ನು ಪ್ರಶ್ನೆ ಮಾಡಿದಂತೆ. ಈಗ ಮಾತನಾಡುತ್ತಿರುವವರು ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ಕಣ್ಣೇ ಬಿಟ್ಟಿರಲಿಲ್ಲ. ಇವಾಗ ವಿಜಯೇಂದ್ರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
29 ರಂದು ಕೋಲಾರ ಮುಳಬಾಗಿಲು ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತೇನೆ. ಈ ವೇಳೆ ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಯಡಿಯೂರಪ್ಪ ಕಷ್ಟದಲ್ಲಿ ಪಕ್ಷ ಕಟ್ಟಿದ್ದಾರೆ. ಕರ್ನಾಟಕದಲ್ಲಿ ಅಧಿಕಾರ ತರಲು ಅವರ ಪಾತ್ರ ಪ್ರಮುಖವಾಗಿದೆ. ಆದರೆ, ಮಾತನಾಡುವವರಿಗೆ ಇದರ ಅರಿವಿಲ್ಲ ಎಂದು ಯತ್ನಾಳ್ ವಿರುದ್ಧ ಗುಡುಗಿದ್ದಾರೆ.
ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದು ಬಿಜೆಪಿ ಬಲವರ್ಧನೆಗಾಗಿ, ಅಲ್ಲಿಂದ ಮುರುಡೇಶ್ವರ ದರ್ಶನ ಪಡೆದು ರವೀಂದ್ರ ನಾಥ್ ಪಾಟೀಲ್ ಅಧ್ಯಕ್ಷತೆಯಲ್ಲಿ ಪೂರ್ವ ಬಾವಿ ಸಭೆ ನಡೆಸುತ್ತೇವೆ. ಯತ್ನಾಳ್ ಮುಹಮ್ಮದ್ ಬಿನ್ ತುಘಲಕ್ ರೀತಿ ಪ್ರವಾಸಕ್ಕೆ ಹೊರಟಿದ್ದಾರೆ. ಸಿದ್ದರಾಮಯ್ಯ ಅಡಿಯಾಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.