ಬೆಳಗಾವಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಈಗಾಗಲೇ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಇಡೀ ಭಾರತವೇ ಕುದಿಯುತ್ತಿದೆ. ಯುದ್ಧದ ಕೂಗು ಕೇಳಿ ಬರುತ್ತಿದೆ. ಈ ಮಧ್ಯೆ ಪ್ರಧಾನಿ ಮೋದಿ ಕೂಡ ಸೈನಿಕರಿಗೆ ಫ್ರೀ ಹ್ಯಾಂಡ್ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದಲ್ಲಿ ಸೈನಿಕರಿಗೆ ಶಕ್ತಿ ಕರುಣಿಸುವಂತೆ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗಿದೆ.
ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಆಂಜನೇಯನಿಗೆ ಹೋಮ, ಹವನ ಮತ್ತು ವಿಶೇಷ ಪೂಜೆ ಸಲ್ಲಿಸಲಾಗಿದೆ. ನಮ್ಮ ಸೈನಿಕರು ಯುದ್ಧಕ್ಕೆ ಹೋದರೆ ಗೆಲುವು ನಮ್ಮದಾಗಲಿ, ನಮ್ಮ ಭಾರತೀಯ ಯೋಧರಿಗೆ ಒಳ್ಳೆಯದಾಗಲಿ. ನಮ್ಮ ಯೋಧರು ಕೆಚ್ಚೆದೆಯಿಂದ ಹೋರಾಡಲಿ. ಅವರ ಪ್ರಾಣಕ್ಕೆ ಕುತ್ತು ಬಾರದಿರಲಿ ಎಂದು ಗ್ರಾಮಸ್ಥರೆಲ್ಲ ಸೇರಿಕೊಂಡು ವಿಶೇಷ ಪೂಜೆ ಕೈಗೊಂಡು ಆಂಜನೇಯನಲ್ಲಿ ಪ್ರಾರ್ಥಿಸಿದ್ದಾರೆ.