ಚೆನ್ನೈ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯು ಆಡಳಿತಾರೂಢ ಡಿಎಂಕೆ ಮತ್ತು ನಟ ವಿಜಯ್ ಅವರ ಟಿವಿಕೆ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆಯೇ ಎಂಬ ಅನುಮಾನ ಮೂಡಿದೆ. ಹೊಸ ಪಕ್ಷ ಸ್ಥಾಪಿಸಿ ಒಂದು ವರ್ಷವಾಗುತ್ತಲೇ ವಿಜಯ್ ಅವರ ರಾಜಕೀಯ ನಾಗಾಲೋಟವು ಮತ್ತಷ್ಟು ತೀವ್ರತೆ ಪಡೆದಿದ್ದು, ರಾಜ್ಯದಲ್ಲಿ ದ್ರಾವಿಡ ದೈತ್ಯ ಪಕ್ಷಗಳನ್ನು ಎದುರು ಹಾಕಿಕೊಳ್ಳಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.
ನಟ- ರಾಜಕಾರಣಿ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ತಮ್ಮ ಪಕ್ಷದ ಮೊದಲ ವಾರ್ಷಿಕೋತ್ಸವವನ್ನು ಮಹಾಬಲಿಪುರಂನಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. ಈ ಮೂಲಕ ಅವರು ತಮಿಳುನಾಡಿನ 2026ರ ಚುನಾವಣೆಗೆ ವೇದಿಕೆ ಸಿದ್ಧಗೊಳಿಸುತ್ತಿರುವ ಸಂದೇಶವನ್ನು ಆಡಳಿತ ಪಕ್ಷಕ್ಕೆ ರವಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಉಪಸ್ಥಿತಿ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ರಣತಂತ್ರ ರೂಪಿಸಿಕೊಟ್ಟು, ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಅವರು ವಿಜಯ್ ಜತೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಟಿವಿಕೆಯ ಚುನಾವಣಾ ರಣತಂತ್ರಕ್ಕೆ ಕೈಜೋಡಿಸುವ ಮುನ್ಸೂಚನೆ ಕೊಟ್ಟಿದ್ದಾರೆ.
ಟಿವಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಾಂತ್ ಕಿಶೋರ್ ಉಪಸ್ಥಿತಿಯು ಪಕ್ಷದ ಚುನಾವಣಾ ಕಾರ್ಯತಂತ್ರದ ಚರ್ಚೆಗೆ ಇನ್ನಷ್ಟು ಇಂಬು ನೀಡಿದೆ. ಭಾರತದಾದ್ಯಂತ ಹಲವಾರು ಪಕ್ಷಗಳ ಗೆಲುವಿನ ಅಭಿಯಾನಗಳನ್ನು ರೂಪಿಸಿರುವ ಕಿಶೋರ್, ಟಿವಿಕೆಗೂ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ.
ಕೇಂದ್ರದಲ್ಲಿ ಬಿಜೆಪಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ #GetOutModi ಮತ್ತು #GetOutStalin ಅಭಿಯಾನಕ್ಕೂ ವಿಜಯ್ ಇದೇ ವೇಳೆ ಚಾಲನೆಯನ್ನೂ ನೀಡಿದ್ದಾರೆ. ಎರಡೂ ಸರ್ಕಾರಗಳು ಜನರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿವೆ ಎಂದು ವಿಜಯ್ ಕಿಡಿ ಕಾರಿದ್ದಾರೆ.
ವಿಜಯ್ ಅವರ ರಾಜಕೀಯ ಪ್ರವೇಶವನ್ನು ತಮಿಳು ಚಿತ್ರರಂಗದ ದಂತಕಥೆಗಳಾದ ಎಂಜಿ ರಾಮಚಂದ್ರನ್ (ಎಂಜಿಆರ್) ಮತ್ತು ಜೆ ಜಯಲಲಿತಾ ಅವರ ರಾಜಕೀಯ ಯಶಸ್ಸುಗಳಿಗೆ ಹೋಲಿಸಲಾಗುತ್ತಿದೆ. ಆದಾಗ್ಯೂ ವಿಜಯ್ ರಾಜಕೀಯ ಭವಿಷ್ಯ ಏನಾಗುತ್ತದೆಂದು ಊಹಿಸುವುದು ಕಷ್ಟಸಾಧ್ಯ. ಏಕೆಂದರೆ ಶಿವಾಜಿ ಗಣೇಶನ್, ವಿಜಯಕಾಂತ್ ಮತ್ತು ಕಮಲ್ ಹಾಸನ್ರಂತಹ ದಿಗ್ಗಜರು ತಮ್ಮ ಸ್ಟಾರ್ ಗಿರಿಯನ್ನು ರಾಜಕೀಯ ಯಶಸ್ಸಾಗಿ ಪರಿವರ್ತಿಸಲು ವಿಫಲಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತಮಿಳುನಾಡು ಆಡಳಿತ ಪಕ್ಷವಾದ ಡಿಎಂಕೆಯ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ವಂಶಪಾರಂಪರ್ಯ ರಾಜಕೀಯದ ಬಗ್ಗೆ ವಿಜಯ್ ಕಟು ಪದಗಳ ಟೀಕೆಗಳನ್ನು ಮುಂದುವರಿಸಿದ್ದಾರೆ. ಜತೆಗೆ ಬಿಜೆಪಿಯ “ಒಂದು ರಾಷ್ಟ್ರ, ಒಂದು ಚುನಾವಣೆ” ಪ್ರಸ್ತಾಪದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ, ಎಐಎಡಿಎಂಕೆ ಬಗ್ಗೆ ಅವರು ಮೌನ ವಹಿಸಿರುವುದು, ಸಂಭಾವ್ಯ ಮೈತ್ರಿಯ ಸುಳಿವನ್ನೂ ನೀಡಿದೆ ಎನ್ನಲಾಗಿದೆ.
ಟಿವಿಕೆ ಇನ್ನೂ ಯಾವುದೇ ಪ್ರಮುಖ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲವಾದರೂ, ವಿಜಯ್- ಎಐಎಡಿಎಂಕೆ ಮೈತ್ರಿ ಮಾಡಿಕೊಂಡರೆ ಆಡಳಿತ ಪಕ್ಷಕ್ಕೆ ಗಂಭೀರ ಸವಾಲು ಎದುರಾಗಲಿದೆ. ಜಯಲಲಿತಾ ಅವರ ನಿಧನದ ನಂತರ ಒಳಜಗಳ ಮತ್ತು ನಾಯಕತ್ವದ ವಿವಾದಗಳಿಂದ ದುರ್ಬಲಗೊಂಡಿರುವ ಎಐಎಡಿಎಂಕೆ, ಚುನಾವಣೆಗೆ ಮುಂಚಿತವಾಗಿ ಬಲಗೊಳ್ಳಲು ನೋಡುತ್ತಿದೆ. ಅದಕ್ಕೆ ವಿಜಯ್ ನೆರವು ನೀಡುವರೇ ಎಂಬುದೇ ಸದ್ಯದ ರಾಜಕೀಯ ಕುತೂಹಲ.