ದಾವಣಗೆರೆ : ಆರ್ಸಿಬಿ ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳು ದುರಂತವಾಗಿ ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರ ಹಾಗೂ RCB ವಿರುದ್ಧ ಪ್ರಣಾವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ, ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಖಾಸಗಿ ದೂರು ಸಲ್ಲಿಸುತ್ತೇನೆ. ದುರಂತದಲ್ಲಿ ಮೃತಪಟ್ಟ ಅಭಿಮಾನಿಗಳ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಎರಡು ದಿನಗಳಲ್ಲಿ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸುತ್ತೇನೆ. ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದಿದ್ದಾರೆ.
ಕುಂಭಮೇಳದಲ್ಲಿ ಹಲವರು ಸಾವನ್ನಪ್ಪಿದ್ದರು. ಆಗ ನೀವು ಇಂಟಲಿಜೆನ್ಸ್ ಫೇಲ್ಯೂರ್ ಅಂದ್ರಿ. ಇದು ಇಂಟಲಿಜೆನ್ಸ್ ಫೇಲ್ಯೂರ್ ಅಲ್ವಾ? ಈ ದುರಂತಕ್ಕೆ ಸರ್ಕಾರವೇ ನೇರ ಹೊಣೆ. ತೆಲಂಗಾಣದಲ್ಲಿ ಅಲ್ಲು ಅರ್ಜುನ್ ಪ್ರಕರಣದ ಮಾದರಿಯಲ್ಲಿ ಸುಮೊಟೋ ಕೇಸ್ ದಾಖಲಿಸಬೇಕು. ಆರ್ಸಿಬಿ ಮ್ಯಾನೇಜ್ಮೆಂಟ್, ನಗರ ಪೊಲೀಸ್ ಆಯುಕ್ತ, ಚಿನ್ನಸ್ವಾಮಿ ಸ್ಟೇಡಿಯಂ ಆಡಳಿತ ಮಂಡಳಿ, ಬಿಸಿಸಿಐ ಎಲ್ಲರ ವಿರುದ್ಧವೂ ಕ್ರಮ ಆಗಬೇಕು. ಹಗಲು ವೇಳೆ ಮಾತ್ರ ಪೋಸ್ಟ್ ಮಾರ್ಟಮ್ ಮಾಡಬೇಕೆಂದು ಕಾನೂನು ಇದೆ. ಆದರೆ, ತರಾತುರಿಯಲ್ಲಿ ರಾತ್ರಿ ಪೋಸ್ಟ್ ಮಾರ್ಟಮ್ ಮಾಡಿ ಮೃತದೇಹ ಹಸ್ತಾಂತರಿಸಿದ್ದೇಕೆ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.