ಬೆಂಗಳೂರು: ಕನ್ನಡ ಜನಪ್ರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ನಿಧನರಾಗಿದ್ದಾರೆ. ಕವಿ, ನಾಟಕಕಾರ, ವಿಮರ್ಶಕ, ಪ್ರಾಧ್ಯಾಪಕ, ಭಾವಗೀತ ರಚನಕಾರ, ಚಲನಚಿತ್ರ ನಿರ್ದೇಶಕ, ಕತೆಗಾರ, ಚಿತ್ರಗೀತೆ ರಚನೆ ಮೂಲಕ ಇವರು ನಾಡಿನ ಮನೆಮಾತಾಗಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರು ಇಬ್ಬರು ಮಕ್ಕಳು, ಬಂಧುಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ 1944ರ ಜೂನ್ 23 ರಂದು ಜನಿಸಿದರು.
ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು.
ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯು ಇವರ ಮೇಲೆ ಅಪಾರ ಪ್ರಭಾವ ಬೀರಿತು.
ಕ್ರಿಯಾಪರ್ವ, ಒಣಮರದ ಗಿಳಿಗಳು, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ನದೀತೀರದಲ್ಲಿ, ಉತ್ತರಾಯಣ ಮತ್ತು ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು-ಮೊದಲಾದುವು ಇವರ ಪ್ರಮುಖ ಕಾವ್ಯಕೃತಿಗಳು. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಅಳಿಲು ರಾಮಾಯಣ, ಹಕ್ಕಿಸಾಲು, ಚಿನ್ನಾರಿಮುತ್ತ, ಅಜ್ಜಿ ಕತೆ ಹೇಳು ಇವರ ಪ್ರಮುಖ ಮಕ್ಕಳ ಕೃತಿಗಳು.