ಕೊಪ್ಪಳ: ಇಂದಿರಾ ಕ್ಯಾಂಟಿನ್ ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ನಗರದಲ್ಲಿರುವ ಇಂದಿರಾ ಕ್ಯಾಂಟಿನ್ ನಲ್ಲಿ ಶನಿವಾರ ಬೆಳಗಿನ ಉಪಹಾರಕ್ಕೆ ಇಡ್ಲಿ, ಆಲೂಬಾತ್ ನೀಡಲಾಗಿತ್ತು. ಆದರೆ, ಇಡ್ಲಿ ಸರಿಯಾಗಿ ಬೆಂದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೇ, ಆಲೂ ಬಾತ್ ನಲ್ಲಿ ಕನಿಷ್ಠ ಒಂದು ಆಲೂ ಸಹ ಇರಲಿಲ್ಲ. ಊಟದ ತಟ್ಟೆಗಳು ಸರಿಯಾಗಿ ತೊಳೆದಿರಲಿಲ್ಲ. ಕಳೆದ ಎರಡು ವರ್ಷದಿಂದ ಇದೇ ರೀತಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿ ಪ್ರತಿಭಟಿಸಿದ್ದಾರೆ.

ಅಲ್ಲದೇ, ಗುತ್ತಿಗೆದಾರರು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದು, ಸರಿಯಾದ ಆಹಾರ ವಿತರಿಸುವಂತೆ ಆಗ್ರಹಿಸಿದ್ದಾರೆ.