ಮಂಗಳೂರು : ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ಖದೀಮರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಬೆಳ್ಳಿಚಡವು ಬಳಿ ನಡೆದಿದೆ.

ಹಾಸನದಿಂದ ಕೇರಳದತ್ತ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರು ಪೊಲೀಸರು ತಡೆಹಿಡಿಯಲು ಮುಂದಾಗಿದ್ದಾರೆ. ಆದ್ರೆ, ಲಾರಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ ಖದೀಮರು, ನೇರವಾಗಿ ಪೊಲೀಸರ ಮೇಲೆ ಲಾರಿ ಹತ್ತಿಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಅಪಾಯದ ಪರಿಸ್ಥಿತಿಯಲ್ಲಿ ಪುತ್ತೂರು ಗ್ರಾಮೀಣ ಠಾಣೆಯ ಪಿಎಸ್ಐ ಜಂಬುರಾಜ್ ಮಹಾಜನ್ ಅವರು ಗುಂಡು ಹಾರಿಸಿದ್ದು, ಆರೋಪಿ ಅಬ್ದುಲ್ಲಾ (40) ಕಾಲಿಗೆ ಗುಂಡು ತಗುಲಿದೆ. ಸದ್ಯ ಗಾಯಗೊಂಡ ಅಬ್ದುಲ್ಲಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆರೋಪಿಯ ಸ್ಥಿತಿ ಸ್ಥಿರವಾಗಿದೆ. ಲಾರಿಯಲ್ಲಿ ಇದ್ದ ಮತ್ತೊಬ್ಬ ಆರೋಪಿ ಘಟನೆಯ ನಂತರ ಪರಾರಿಯಾಗಿದ್ದಾನೆ. ಪೊಲೀಸರು ಅವನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಅದರೊಳಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಗೋವುಗಳನ್ನು ರಕ್ಷಿಸಿದ್ದಾರೆ. ಈ ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪುತ್ತೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.