ಬಳ್ಳಾರಿ: ಕಳ್ಳರ ಜೊತೆ ಸೇರಿ ಲಕ್ಷ ಲಕ್ಷ ದೋಚಿದ್ದ ಪೊಲೀಸ್ ನನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಬಳ್ಳಾರಿಯ ಬ್ರೂಸ್ಪೇಟೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಮೆಹಬೂಬ್ ಪಾಷಾ ಎಂಬಾತ ಕಳ್ಳರ ಜೊತೆ ಕೈ ಜೋಡಿಸಿ ಲಕ್ಷ ಲಕ್ಷ ನುಂಗಿದ್ದಾನೆ ಎನ್ನಲಾಗಿದೆ. ಈ ಪೊಲೀಸ್ ಕಳ್ಳರು ಕದ್ದ ಮಾಲಲ್ಲೇ ತನಗೂ ಪಾಲು ಪಡೆದು ನಂತರ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ.
ಸೆ. 12ರಂದು ಬೆಳಗಿನ ಜಾವ ರಾಯದುರ್ಗಾ ಬಸ್ ನಿಲ್ದಾಣದ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರದ ಪುಡಿ ಎರಚಿ 22 ಲಕ್ಷ 99 ಸಾವಿರ ನಗದು ಮತ್ತು 318 ಗ್ರಾಂ ಚಿನ್ನ ದೋಚಿ ಖದೀಮರ ಗ್ಯಾಂಗ್ ಪರಾರಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೌಸೀಫ್, ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್, ಆರೀಫ್ ಸೇರಿದಂತೆ 7 ಜನ ಅರೆಸ್ಟ್ ಆಗಿದ್ದರು.
ಆದರೆ, ಈ ಖದೀಮರ ಜೊತೆ ಸೇರಿ ಹೆಡ್ ಕಾನ್ಸ್ಟೇಬಲ್ ಮೆಹಬೂಬ್ ಪಾಷಾ ಹಣಕೊಳ್ಳೆ ಹೊಡೆದಿದ್ದ ಎನ್ನಲಾಗಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿತನಾಗಿರುವ ಪೊಲೀಸ್ ಈ ಕಳ್ಳತನದಲ್ಲಿ ಬರೋಬ್ಬರಿ 9 ಲಕ್ಷ ರೂ. ಹಣ ಪಡೆದಿದ್ದ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಲಕ್ಷ 91ಸಾವಿರ ನಗದು, 116 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ ಸ್ಟೇಬಲ್ ಮೆಹಬೂಬ್ ಪಾಷಾನನ್ನು ಸಸ್ಪೆಂಡ್ ಮಾಡಿ ಎಸ್ಪಿ ಡಾ. ಶೋಭಾರಾಣಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.