ಬೆಂಗಳೂರು: ಹವಾಲಾ ದುಡ್ಡು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರನ್ನೇ ಅರೆಸ್ಟ್ ಮಾಡಲಾಗಿದೆ.
ಚಿಕ್ಕಜಾಲದ ಹೆಡ್ ಕಾನ್ಸ್ ಟೇಬಲ್ ವಿಜಯ್ ಕುಮಾರ್, ಕಾನ್ಸ್ ಟೇಬಲ್ ಸಂತೋಷ, ಕಾನ್ಸ್ ಟೇಬಲ್ ಮಂಜುನಾಥ ಅರೆಸ್ಟ್ ಆದವರು. ಬಾಗಲೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಸೇರಿದಂತೆ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಕಾನ್ಸ್ ಟೇಬಲ್ ಸಂತೋಷ್, ಪಿಕೆ ಎಂಬ ವ್ಯಕ್ತಿಯನ್ನು ಬಳಸಿಕೊಂಡು ವ್ಯವಹಾರ ಮಾಡುತ್ತಿದ್ದ. ಮೇ 4ರಂದು ಚಿಕ್ಕಜಾಲ ಲಿಮಿಟ್ಸ್ ನಲ್ಲಿ ಡಿಕಾಯ್ ಮಾಡಿ ಹವಾಲಾ ವ್ಯಕ್ತಿಗಳಿಂದಲೇ ಕೋಟಿ ರೂ. ಹಣ ದೋಚಿದ್ದರು. ಅಲ್ಲದೇ, ಕಂಪ್ಲೆಂಟ್ ಕೊಟ್ಟರೆ ಕೇಸ್ ಮಾಡ್ತೀವಿ ಅಂತ ಬೆದರಿಕೆ ಹಾಕಿದ್ದರು. ಇದರಿಂದಾಗಿ ಭಯಬಿದ್ದ ಹವಾಲಾ ವ್ಯಕ್ತಿಗಳು ಪೊಲೀಸರ ಕೈಗೆ ಕೋಟಿ ರೂಪಾಯಿ ಕೊಟ್ಟು ಪರಾರಿಯಾಗಿದ್ದರು.
ಆದರೆ, ಹಣ ಲೂಟಿ ಮಾಡಿದ್ದ ಪೊಲೀಸರು ಇನ್ಫಾರ್ಮರ್ ಗೆ ನಯಾಪೈಸೆನೂ ಕೊಟ್ಟಿರಲಿಲ್ಲ. ಹೀಗಾಗಿ ಇನ್ಫಾರ್ಮರ್ ತನ್ನದೇ ತಂಡ ಕಟ್ಟಿಕೊಂಡು ಅದೇ ಹವಾಲಾ ಗ್ಯಾಂಗ್ ನ್ನು ಫಾಲೋ ಮಾಡಿದ್ದ. ಬಾಗಲೂರು ಭಾಗದಲ್ಲಿ ಹವಾಲಾ ಗ್ಯಾಂಗ್ ಕೋಟಿ ಹಣವನ್ನು ಎಕ್ಸ್ ಚೇಂಜ್ ಮಾಡುವ ಟೈಮ್ ನಲ್ಲಿ ಇನ್ಫಾರ್ಮರ್ ಟೀಂ ಹೆದರಿಸಿ ಸುಲಿಗೆ ಮಾಡಿತ್ತು. ಕೋಟಿ ಹಣವನ್ನ ಕೊಳ್ಳೆ ಹೊಡೆದು ಪರಾರಿಯಾಗುತ್ತಿದ್ದಂತೆ ಹವಾಲಾ ಟೀಂ ಬಾಗಲೂರು ಪೊಲೀಸರಿಗೆ ದೂರು ನೀಡಿತ್ತು.

ತನಿಖೆಯ ವೇಳೆ ಆರೋಪಿಗಳು ಪೊಲೀಸ್ ಇನ್ಫಾರ್ಮರ್ ಗಳೆಂಬುವುದು ಬೆಳಕಿಗೆ ಬಂದಿದೆ. ಅಲ್ಲದೇ, ಮೂವರು ಪೊಲೀಸರ ಜೊತೆ ಸೇರಿ ಸುಲಿಗೆ ಮಾಡಿದ್ದ ವಿಚಾರ ತನಿಖೆ ವೇಳೆ ಬಯಲಿಗೆ ಬಂದಿದೆ. ಹತ್ತಾರು ಕೇಸ್ ನಲ್ಲಿ ಸುಲಿಗೆ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.