ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು ಸೇರಿ ಹಲವು ಉದ್ದೇಶಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರವು ಪಿಎಂ ಸ್ವನಿಧಿ ಯೋಜನೆ ಜಾರಿಗೊಳಿಸಿದೆ. ವ್ಯಾಪಾರದಲ್ಲಿ ಪ್ರಗತಿ ಸಾಧಿಸಲು ಬಂಡವಾಳದ ಅಗತ್ಯ ಇರುವವರು ಅರ್ಜಿ ಸಲ್ಲಿಸುವ ಮೂಲಕ ಸಾಲ ಪಡೆಯಬಹುದಾಗಿದೆ. ಸಾಲಗಳ ನಿಯಮಿತ ಮರುಪಾವತಿಯ ಮೇಲೆ ವಾರ್ಷಿಕ ಶೇ.7ರಷ್ಟು ಬಡ್ಡಿ ಸಬ್ಸಿಡಿಯೂ ದೊರೆಯಲಿದೆ.
ಮೊದಲ ಹಂತದಲ್ಲಿ 12 ತಿಂಗಳ ಅವಧಿಗೆ 10,000 ರೂ. ವರೆಗೆ ಸಾಲ ನೀಡಲಾಗುತ್ತದೆ. ಎರಡನೇ ಹಂತದಲ್ಲಿ 18 ತಿಂಗಳ ಅವಧಿಗೆ 15,000 ರೂ. ರಿಂದ 20,000 ರೂ.ರವರೆಗೆ ಸಾಲ ನೀಡಲಾಗುತ್ತದೆ. ಹಾಗೆಯೇ, ಮೂರನೇ ಹಂತದಲ್ಲಿ 36 ತಿಂಗಳ ಅವಧಿಗೆ 30,000 ರೂ. ರಿಂದ 50,000 ರೂ. ರವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
ನಗರ ಪ್ರದೇಶಗಳಲ್ಲಿರುವ ಬೀದಿ ಬದಿ ವ್ಯಾಪಾರಿಗಳು ಸಾಲ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಬೀದಿ ಬದಿಗಳಲ್ಲಿ ಹಣ್ಣು, ತರಕಾರಿ, ರೆಡಿ ಟು ಈಟ್ ಫುಡ್ ತಯಾರಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ನೀಡುವ ಮಾರಾಟ ಪ್ರಮಾಣಪತ್ರ ಅಥವಾ ಗುರುತಿನ ಚೀಟಿಯನ್ನು ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.
ಹಾಗೊಂದು ವೇಳೆ, ಬೀದಿ ಬದಿ ವ್ಯಾಪಾರಿಗಳು ನಗರ ಸ್ಥಳೀಯ ಸಂಸ್ಥೆಗಳು ನಡೆಸಿದ ಗುರುತಿನ ಸಮೀಕ್ಷೆಯಿಂದ ಹೊರಗುಳಿದಿದ್ದರೆ ಅಥವಾ ಸಮೀಕ್ಷೆ ಪೂರ್ಣಗೊಂಡ ನಂತರ ಮಾರಾಟವನ್ನು ಪ್ರಾರಂಭಿಸಿದ್ದರೆ ನಗರ ಸ್ಥಳೀಯ ಸಂಸ್ಥೆಗಳು ಅಥವಾ ಪಟ್ಟಣ ಮಾರಾಟ ಸಮಿತಿಯಿಂದ ಶಿಫಾರಸು ಪತ್ರವನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಬೀದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಪೋರ್ಟಲ್ ಮೂಲಕ ನೇರವಾಗಿ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ ನಿರ್ದಿಷ್ಟ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್ ಬಿ ಎಫ್ ಸಿ), ಸೂಕ್ಷ್ಮ ಹಣಕಾಸು ಸಂಸ್ಥೆಗಳು (ಎಂಎಫ್ಐಗಳು) ಮತ್ತು ಸ್ವ-ಸಹಾಯ ಗುಂಪು (ಎಸ್ ಎಚ್ ಜಿ) ಬ್ಯಾಂಕುಗಳು ಸೇರಿ ವಿವಿಧ ಸಂಸ್ಥೆಗಳು ಸಾಲ ನೀಡುತ್ತವೆ.