ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತಿನ 2 ಸಾವಿರ ರೂಪಾಯಿಯನ್ನು ಬಿಡುಗಡೆ ಮಾಡುವ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಹೌದು, ಆಗಸ್ಟ್ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ 2 ಸಾವಿರ ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಲಿದ್ದಾರೆ. ದೇಶದ ಒಟ್ಟು 9.7 ಕೋಟಿ ರೈತರ ಖಾತೆಗಳಿಗೆ ಆಗಸ್ಟ್ 2ರಂದು 20,500 ಕೋಟಿ ರೂ. ಜಮೆಯಾಗಲಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ ಯೋಜನೆ ಕೇಂದ್ರ ಸರ್ಕಾರ ಪ್ರಾರಂಭಿಸಿದ ಯೋಜನೆಯಾಗಿದ್ದು, ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6000 ರೂ. ಆರ್ಥಿಕ ನೆರವು ಒದಗಿಸುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2000 ರೂ.ನಂತ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಈ ವರೆಗೆ 19 ಕಂತುಗಳಲ್ಲಿ ರೈತರ ಖಾತೆಗೆ ಹಣವನ್ನು ಪಾವತಿ ಮಾಡಲಾಗಿದೆ.
ಇನ್ನು, ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ರೈರು ಕೆವೈಸಿ ಪೂರ್ಣಗೊಳಿಸುವುದು ಪ್ರಮುಖ ಸಂಗತಿಯಾಗಿದೆ. ನೀವು ಕೂಡ ಪಿಎಂ ಕಿಸಾನ್ ನಿಧಿಯ ಫಲಾನುಭವಿಗಳಾಗಿದ್ದರೆ ಮತ್ತು 20ನೇ ಕಂತಿಗಾಗಿ ಕಾಯುತ್ತಿದ್ದರೆ, ನೀವು ಕೆವೈಸಿ (KYC) ಮಾಡಿಸುವುದು ಬಹಳ ಮುಖ್ಯ. ನೀವು ಇನ್ನೂ ಕೆವೈಸಿ ಮಾಡಿಸದಿದ್ದರೆ, ನಿಮ್ಮ ಹಣ ಖಾತೆಗೆ ಜಮೆಯಾಗದೆ ಸಿಲುಕಿಕೊಳ್ಳಬಹುದು. ಹಾಗಾಗಿ, ಕೂಡಲೇ ಕೆವೈಸಿ ಮಾಡಿಸಿ. ಹೇಗೆ ಮಾಡುವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಕೆವೈಸಿ ಪೂರ್ಣಗೊಳಿಸುವುದು ಹೇಗೆ?
– ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ – pmkisan.gov.in ಗೆ ಭೇಟಿ ನೀಡಿ
– ‘ಫಾರ್ಮರ್ಸ್ ಕಾರ್ನರ್’ವಿಭಾಗದ ಅಡಿಯಲ್ಲಿ, ‘ಹೊಸ ರೈತ ನೋಂದಣಿ’ ಮೇಲೆ ಕ್ಲಿಕ್ ಮಾಡಿ.
– ನಿಮ್ಮ ಆಧಾರ್ ಸಂಖ್ಯೆ, ರಾಜ್ಯ ಮತ್ತು ಬ್ಯಾಂಕ್ ವಿವರಗಳನ್ನು ನಮೂದಿಸಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
‘ಸಲ್ಲಿಸು’ ಕ್ಲಿಕ್ ಮಾಡಿ. ಪರಿಶೀಲಿಸಿದ ನಂತರ, ನೀವು ನಿಮ್ಮ ಕಂತುಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.