ಉಡುಪಿ | ಉಡುಪಿಯಲ್ಲಿ ನವೆಂಬರ್ 8ರಿಂದ ಡಿಸೆಂಬರ್ 7ರವರೆಗೆ ಬೃಹತ್ ಗೀತೋತ್ಸವ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ 30ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪರ್ಯಾಯ ಶ್ರೀಗಳು, ನವೆಂಬರ್ 28ರಂದು ಬೆಳಗ್ಗೆ 11 ಗಂಟೆಗೆ ಕೃಷ್ಣಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬಳಿಕ ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಲಿದ್ದಾರೆ. ತದನಂತರ ಕನಕನ ಕಿಂಡಿಗೆ ಸುವರ್ಣ ಕವಚವನ್ನು ನಮೋ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆ ಬಳಿಕ ಮೋದಿ ಅವರು ಗೀತಾಮಂದಿರಕ್ಕೆ ಭೇಟಿ ನೀಡಿ, ಮಠದಲ್ಲೇ ಪ್ರಸಾದ ಸ್ವೀಕರಿಸಲಿದ್ದಾರೆ. ವಿಶಾಲ ಗದ್ದೆಯಲ್ಲಿ ಲಕ್ಷ ಕಂಠ ಗೀತಾ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸುಮಾರು ಹತ್ತು ಶ್ಲೋಕ ಪಠಣ ಮಾಡುತ್ತಾರೆ. ಮೋದಿ ವಿಶ್ವದಾದ್ಯಂತ ಭಗವದ್ಗೀತೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ವಿಶ್ವ ನಾಯಕ ವಿಶ್ವಗೀತಾ ಪರ್ಯಾಯಕ್ಕೆ ಬರುತ್ತಿರುವುದು ಬಹಳ ಸಂತೋಷವಾಗಿದ್ದು, ದ.ಕ, ಚಿಕ್ಕಮಗಳೂರು, ಉ.ಕ, ಹಾಸನ, ಶಿವಮೊಗ್ಗದಿಂದ ಜನ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ನವೆಂಬರ್ 30ಕ್ಕೆ ಕೃಷ್ಣ ಮಠದಲ್ಲಿ ಸಂತ ಸಂಗಮ ನಡೆಯಲಿದ್ದು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ ವಿಜೇತ ಮಹಿಳಾ ತಂಡಕ್ಕೆ ರಾಷ್ಟ್ರಪತಿ ಪ್ರಶಂಸೆ | ದ್ರೌಪದಿ ಮುರ್ಮುಗೆ ಟೀಂ ಇಂಡಿಯಾ ಜೆರ್ಸಿ ಗಿಫ್ಟ್!



















