ಟೇಕ್ ಆಫ್ ಆದ ಕೂಡಲೇ ಏರ್ ಇಂಡಿಯಾ ವಿಮಾನ ಪತನವಾಗಿರುವ ದುರಂತ ಘಟನೆಯೊಂದು ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.
ಈ ವಿಮಾನ ನಿಲ್ದಾಣದ ಆವರಣದಿಂದ ದಟ್ಟ ಹೊಗೆ ಹೊರಬರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಂದು ಮಧ್ಯಾಹ್ನ ಗುಜರಾತ್ನ ಅಹಮದಾಬಾದ್ನ ಮೇಘನಿ ನಗರ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಿಂದ ದಟ್ಟ ಹೊಗೆಯ ಮೋಡ ಆವರಿಸುತ್ತಿರುವುದು ಕಂಡು ಬಂದಿದೆ. ಹೊಗೆ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.
ವಿಮಾನದಲ್ಲಿ 242 ಮಂದಿ ಇದ್ದು, ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ವಿಮಾನ ಪತನವಾಗುತ್ತಿದ್ದಂತೆ ವಿಮಾನ ಹೊತ್ತಿ ಉರಿದಿದೆ. ಹೀಗಾಗಿ 242 ಮಂದಿ ಪ್ರಯಾಣಿಕರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಈ ವಿಮಾನ ಇಂಗ್ಲೆಂಡ್ ಗೆ ಹೊರಟಿತ್ತು ಎನ್ನಲಾಗಿದೆ.
ವಿಮಾನದ ಇಂಜಿನ್ ದೋಷವೇ ದುರಂತಕ್ಕೆ ಕಾರಣವಾ ಎಂಬ ಶಂಕೆ ವ್ಯಕ್ತವಾಗಿದೆ. ದುರಂತಕ್ಕೂ 20 ನಿಮಿಷ ಮುಂಚೆ ಎಟಿಸಿಗೆ ಪೈಲೆಟ್ ಮಾಹಿತಿ ನೀಡಿದ್ದರು. ಅಹಮದಾಬಾದ್ ಎಟಿಸಿಗೆ ಪೈಲೆಟ್ ಮಾಹಿತಿ ನೀಡಿದ 20 ನಿಮಿಷಗಳಲ್ಲೇ ಈ ದುರಂತ ಸಂಭವಿಸಿದೆ. ದುರಂತಕ್ಕೀಡಾದ ವಿಮಾನದಲ್ಲಿ ಗುಜರಾತ್ ನ ಮಾಜಿ ಸಿಎಂ ವಿಜಯ್ ರುಪಾನಿ ಕೂಡ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಾಲಿ ಸಿಎಂಗೆ ಕರೆ ಮಾಡಿ ರುಪಾನಿ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.