ಲಖನೌ: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿನ ಮೇಲೆ ಕಲ್ಲಿನಿಂದ ಗುದ್ದಿ ಹಾನಿ ಮಾಡಲಾಗಿದೆ. ಝಾನ್ಸಿಯಿಂದ (Jhansi) ಪ್ರಯಾಗ್ರಾಜ್ಗೆ (Prayagraj) ಹೋಗುತ್ತಿದ್ದ ವಿಶೇಷ ರೈಲಿಗೆ(Special Train) ಕಲ್ಲಿನಿಂದ ಹೊಡೆಯಲಾಗಿದೆ. ಮಧ್ಯಪ್ರದೇಶದ ಹರ್ಪಾಲ್ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲಿಗೆ ಕಲ್ಲು ಎಸೆದಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ಪ್ರಯಾಗ್ರಾಜ್ಗೆ ರೈಲು ತೆರಳುತ್ತಿತ್ತು. ಕಿಕ್ಕಿರಿದ ಜನ ಸಂದಣಿಯಿಂದಾಗಿ ರೈಲಿನ ಬಾಗಿಲನ್ನು ಮುಚ್ಚಲಾಗಿತ್ತು. ಬಾಗಿಲು ತೆರೆಯದ ಕಾರಣಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ಕಲ್ಲಿನಿಂದ ಬಾಗಿಲಿನ ಗಾಜನ್ನು ಪುಡಿ-ಪುಡಿ ಮಾಡಿದ್ದಾರೆ. ದೊಡ್ಡ ಕಲ್ಲು ಎಸೆದು ಟ್ರೈನ್ನ ಬಾಗಿಲಿನ ಗಾಜು ಒಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
“ಪ್ಲಾಟ್ಫಾರಂನಲ್ಲಿ ಸುಮಾರು 7 ರಿಂದ 8 ಸಾವಿರ ಜನರಿದ್ದರು ಎನ್ನಲಾಗಿದೆ. ಕಿಕ್ಕಿರಿದ ಪ್ರಯಾಣಿಕರಿದ್ದ ಕಾರಣ ಟ್ರೈನ್ ನಿಲ್ಲಿಸಿದರೂ ಬಾಗಿಲು ತೆರೆದಿರಲಿಲ್ಲ. ಆಕ್ರೋಶಗೊಂಡ ಪ್ರಯಾಣಿಕರು ದಾಳಿ ನಡೆಸಿದ್ದಾರೆ. ಒಂದು ಗಂಟೆ ಕಾಲ ಪರಿಸ್ಥಿತಿ ಹದಗೆಟ್ಟಿತ್ತು. ಕೂಡಲೇ ಅಧಿಕಾರಿಗಳು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಟ್ರೈನ್ ತೆರಳಲು ಅನುವು ಮಾಡಿಕೊಟ್ಟಿದ್ದೇವೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಪುಷ್ಪಕ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕುಂಭಮೇಳಕ್ಕೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ
ಕೆಲವು ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಜಲ್ಗಾಂವ್ ರೈಲ್ವೆ ನಿಲ್ದಾಣದಲ್ಲಿ ಕುಂಭ ಮೇಳಕ್ಕೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಜನವರಿ 12 ರಂದು ಸೂರತ್ನಿಂದ ಛಾಪ್ರಾಗೆ ತೆರಳುತ್ತಿದ್ದ ತಪತಿ ಗಂಗಾ ಎಕ್ಸ್ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.
“ನಾವು ಸೂರತ್ ಉದ್ನಾದಿಂದ ಪ್ರಯಾಗ್ರಾಜ್ಗೆ ಹೊರಟಿದ್ದೆವು. ಜಲಗಾಂವ್ನಿಂದ 3 ಕಿ.ಮೀ ಮುಂದೆ ಕೆಲವು ಕಿಡಿಗೇಡಿಗಳು ಕಲ್ಲು ಮೇಲೆ ಕಲ್ಲು ಎಸೆದಿದ್ದಾರೆ. ನಮಗೆ ಭದ್ರತೆ ಒದಗಿಸುವಂತೆ ನಾವು ರೈಲ್ವೆ ಸಚಿವರಿಗೆ ವಿನಂತಿಸುತ್ತೇವೆ ಎಂದು ಹಾನಿಗೊಳಗಾದ ಕೋಚ್ನಲ್ಲಿದ್ದ ಪ್ರಯಾಣಿಕ ರಾಜೇಂದ್ರ ಗುಪ್ತಾ, ಹಾನಿಗೊಳಗಾದ ಕಿಟಕಿಯನ್ನು ತೋರಿಸಿ ಮನವಿ ಮಾಡಿದ್ದರು.
ಈ ಬಗ್ಗೆ ಮಾತನಾಡಿದ್ದ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ, ಜಲಗಾಂವ್ ಬಳಿಯ ಸೂರತ್ ಉದ್ನಾದಿಂದ ಬರುತ್ತಿದ್ದ ಈ ರೈಲಿನ ಮೇಲೆ ಕಲ್ಲು ತೂರಲಾಗಿದೆ. ಈ ಸಂದರ್ಭದಲ್ಲಿ ರೈಲ್ವೇ ರಕ್ಷಣಾ ಪಡೆ ತಕ್ಷಣ ಕ್ರಮ ಕೈಗೊಂಡು ರೈಲಿನಲ್ಲಿ ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ. ದೂರು ಕೂಡ ದಾಖಲಾಗಿದೆ” ಎಂದು ಹೇಳಿದ್ದರು.