ಇಸ್ಲಾಮಾಬಾದ್: ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಸೆಮಿಫೈನಲ್ ಹಂತಕ್ಕೇರಲು ವಿಫಲವಾಗಿ ಹೊರಬಿದ್ದ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ವೇಗಿ ‘ರಾವಲ್ಪಿಂಡಿ ಎಕ್ಸ್ಪ್ರೆಸ್’ ಶೋಯೆಬ್ ಅಖ್ತರ್ ಆಕ್ರೋಶದ ಜ್ವಾಲೆ ಚೆಲ್ಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ‘ಪರಮಾಣು ದಾಳಿ’ಯ ಮಾದರಿಯಲ್ಲಿ ವಾಗ್ದಾಳಿ ನಡೆಸಿರುವ ಅಖ್ತರ್, ತಂಡದ ಅವ್ಯವಸ್ಥೆಗೆ ಮಂಡಳಿಯ ಒಳಗಿನ ರಾಜಕೀಯವೇ ಕಾರಣ ಎಂದು ದೂರಿದ್ದಾರೆ.
ಲೈವ್ ಟೆಲಿವಿಷನ್ ಚರ್ಚೆಯೊಂದರಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು. “ಮೊಹ್ಸಿನ್ ನಖ್ವಿ ಅವರಿಗೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿಲ್ಲ ಎಂಬುದು ನನಗೆ ಗೊತ್ತು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅವರು ತಂಡಕ್ಕೆ ಒಳ್ಳೆಯದನ್ನೇ ಮಾಡಲು ಬಯಸುತ್ತಿದ್ದಾರೆ. ದುರಂತವೆಂದರೆ, ಅವರು ಮಂಡಳಿಯಲ್ಲಿ ತಪ್ಪು ವ್ಯಕ್ತಿಗಳಿಂದ ಸಲಹೆ ಪಡೆಯುತ್ತಿದ್ದಾರೆ. ಅವರ ಸುತ್ತಲಿರುವ ಅಧಿಕಾರಿಗಳು ಅವರಿಗೆ ತಪ್ಪು ಮಾಹಿತಿ ನೀಡಿ, ಅವರ ವ್ಯಕ್ತಿತ್ವವನ್ನು ಕೆಡಿಸುತ್ತಿದ್ದಾರೆ,” ಎಂದು ಅಖ್ತರ್ ಕಿಡಿಕಾರಿದ್ದಾರೆ.
ಸತತ ವೈಫಲ್ಯಕ್ಕೆ ಮಂಡಳಿಯೇ ಹೊಣೆ
ಪಾಕಿಸ್ತಾನ ತಂಡವು ಸತತ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಕ್ವಾಲಿಫೈಯರ್ ಹಂತದಲ್ಲೇ ಸೋಲುತ್ತಿರುವುದನ್ನು ಪ್ರಸ್ತಾಪಿಸಿದ ಅಖ್ತರ್, “ನಖ್ವಿ ಅವರು ಜನರಲ್ ತೋಕಿರ್ ಜಿಯಾ ಅವರ ನಂತರ ಕಂಡ ಅತ್ಯಂತ ಶಕ್ತಿಶಾಲಿ ಅಧ್ಯಕ್ಷರು. ಅವರ ಬಳಿಕ ಎಲ್ಲ ಸಂಪನ್ಮೂಲಗಳಿವೆ, ಅಧಿಕಾರವಿದೆ. ಆದರೆ ತಮ್ಮ ಮ್ಯಾನೇಜ್ಮೆಂಟ್ ತಂಡವನ್ನು ಸರಿಯಾಗಿ ಕಟ್ಟಲು ಅವರಿಂದ ಸಾಧ್ಯವಾಗುತ್ತಿಲ್ಲ. ಮಂಡಳಿಯ ಒಳಗಡೆ ಏನೋ ಗಂಭೀರವಾದ ಸಮಸ್ಯೆ ಇದೆ,” ಎಂದು ಮಂಡಳಿಯ ಹುಳುಕನ್ನು ಎತ್ತಿ ತೋರಿಸಿದ್ದಾರೆ.
ಪ್ರಮುಖ ಆಟಗಾರರ ಕಡೆಗಣನೆಗೆ ಆಕ್ಷೇಪ
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಂಡದ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಖ್ತರ್, ತಂಡದ ಬೆನ್ನೆಲುಬಾಗಿದ್ದ ನಸೀಮ್ ಶಾ, ಅಬ್ರಾರ್ ಅಹ್ಮದ್ ಮತ್ತು ಫಖರ್ ಜಮಾನ್ ಅವರಂತಹ ಆಟಗಾರರನ್ನು ಬೆಂಚ್ ಮೇಲೆ ಕೂರಿಸಿದ್ದನ್ನು ಕಟುವಾಗಿ ಟೀಕಿಸಿದರು. “ಇವರು ತಂಡದ ಕೀ ಆಟಗಾರರು, ಇವರನ್ನೇ ಪಂದ್ಯದಿಂದ ಹೊರಗಿಟ್ಟರೆ ಗೆಲುವು ಹೇಗೆ ಸಾಧ್ಯ? ಈ ತಪ್ಪು ನಿರ್ಧಾರಗಳೇ ಪಾಕಿಸ್ತಾನದ ಪತನಕ್ಕೆ ಕಾರಣ,” ಎಂದು ಆಕ್ರೋಶ ಹೊರಹಾಕಿದರು.
ಟಿ20 ವಿಶ್ವಕಪ್ನಿಂದ ಪಾಕಿಸ್ತಾನ ಔಟ್
ಫೆಬ್ರವರಿ 28 ರಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಜಯಗಳಿಸಿದರೂ, ಅದು ಸೆಮಿಫೈನಲ್ ಪ್ರವೇಶಿಸಲು ನೆರವಾಗಲಿಲ್ಲ. ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ 3 ಅಂಕಗಳನ್ನು ಹೊಂದಿದ್ದವು. ಆದರೆ ‘ನೆಟ್ ರನ್ ರೇಟ್’ (Net Run Rate) ಆಧಾರದಲ್ಲಿ ನ್ಯೂಜಿಲೆಂಡ್ ಸೆಮಿಫೈನಲ್ಗೆ ಅರ್ಹತೆ ಪಡೆಯಿತು, ಪಾಕಿಸ್ತಾನ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು.
“ಪಾಕಿಸ್ತಾನ ಕ್ರಿಕೆಟ್ಗೆ ಸದ್ಯ ಮೊಹ್ಸಿನ್ ನಖ್ವಿ ಅವರೇ ಕೊನೆಯ ಭರವಸೆ. ಆದರೆ ಅವರು ಕೂಡಲೇ ಎಚ್ಚೆತ್ತುಕೊಂಡು ತಮ್ಮ ಸುತ್ತಲಿರುವ ‘ತಪ್ಪು ಸಲಹೆಗಾರರನ್ನು’ ಹೊರದಬ್ಬದಿದ್ದರೆ ಪಾಕ್ ಕ್ರಿಕೆಟ್ ಅಧೋಗತಿಗೆ ಇಳಿಯುವುದು ಖಚಿತ,” ಎಂದು ಅಖ್ತರ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ : “ಇದು ಪಾಕಿಸ್ತಾನ ತಂಡವಲ್ಲ, ಮೈಕ್ ಹೆಸನ್ ತಂಡ!” : ವಿಶ್ವಕಪ್ ಸೋಲಿನ ಬೆನ್ನಲ್ಲೇ ಬಸಿತ್ ಅಲಿ ಆಕ್ರೋಶ



















