ಬೆಂಗಳೂರು: ಹೆಲ್ತ್ ಇನ್ಶೂರೆನ್ಸ್, ಲೈಫ್ ಇನ್ಶೂರೆನ್ಸ್ ಹಾಗೂ ಟರ್ಮ್ ಇನ್ಶೂರೆನ್ಸ್ ಪ್ರೀಮಿಯಂಗಳು ಈಗ ದುಬಾರಿಯಾಗಿವೆ. ಇವುಗಳಿಗೆ ಜಿಎಸ್ ಟಿಯೂ ಇರುವುದರಿಂದ ಹೆಚ್ಚಿನ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಆದರೆ, ಬಡವರು ಕೂಡ ವಿಮಾ ಸೌಲಭ್ಯ ಪಡೆಯಬೇಕು ಎಂದು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಜಾರಿಗೊಳಿಸಿದೆ. ಕೇವಲ 20 ರೂಪಾಯಿ ಪಾವತಿಸಿದರೆ 2 ಲಕ್ಷ ರೂಪಾಯಿ ಅಪಘಾತ ವಿಮಾ ಸುರಕ್ಷತೆ ಸಿಗುತ್ತದೆ.
ಕೇಂದ್ರ ಸರ್ಕಾರವು 2015ರ ಮೇ ತಿಂಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಜಾರಿಗೊಳಿಸಿದೆ. ಯೋಜನೆಯು ವ್ಯಕ್ತಿಗಳಿಗೆ ಕೈಗೆಟುಕುವ ವೈಯಕ್ತಿಕ ಅಪಘಾತ ವಿಮೆಯನ್ನು ಒದಗಿಸುವ ಗುರಿ ಹೊಂದಿದೆ. ವಿಮೆ ಮಾಡಿಸಿದವರು ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಒದಗಿಸಲಾಗುತ್ತದೆ. ಇದು ಅಪಘಾತಗಳಿಂದ ಉಂಟಾಗುವ ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ವಿಮಾ ಕವರೇಜ್ ನೀಡುತ್ತದೆ. ಯೋಜನೆಯ ವಿಮಾ ಘಟಕವನ್ನು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು ಮತ್ತು ಇತರ ಖಾಸಗಿ ವಲಯದ ವಿಮಾ ಪೂರೈಕೆದಾರರು ನಿರ್ವಹಣೆ ಮಾಡುತ್ತವೆ.
ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟರೆ, ಅವರ ಕುಟುಂಬಸ್ಥರು ಅಥವಾ ನಾಮನಿರ್ದೇಶಿತರಿಗೆ 2 ಲಕ್ಷ ರೂ. ವಿಮಾ ಮೊತ್ತ ಲಭಿಸುತ್ತದೆ. ಅಪಘಾತದಿಂದಾಗಿ ಶಾಶ್ವತ ಒಟ್ಟು ಅಂಗವೈಕಲ್ಯ ಉಂಟಾದರೆ, ಪಾಲಿಸಿದಾರರು 2 ಲಕ್ಷ ರೂ.ಗಳ ವಿಮಾ ಮೊತ್ತವನ್ನು ಪಡೆಯುತ್ತಾರೆ. ಒಂದು ಕಣ್ಣಿನ ದೃಷ್ಟಿ ನಷ್ಟ ಅಥವಾ ಒಂದು ಕೈ ಕಳೆದುಕೊಂಡರೆ 1 ಲಕ್ಷ ರೂ. ಸಿಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಹಾಗೆಯೇ, https://jansuraksha.gov.in/Forms-PMSBY.aspx ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಅರ್ಜಿಯನ್ನು ಡೌನ್ ಲೋಡ್ ಮಾಡಿದ ನಂತರ, ಅಭ್ಯರ್ಥಿಯ ಎಲ್ಲ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳು ಬ್ಯಾಂಕಿಗೆ ಸಲ್ಲಿಸಬಹುದು. ಪ್ರೀಮಿಯಂ ಅನ್ನು ಪಾಲಿಸಿದಾರರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಡೆಬಿಟ್ ಮಾಡಲಾಗುತ್ತದೆ.