ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೀವನಪಾಠವನ್ನು ಮಾಡಿದ್ದಾರೆ. ಸೋಮವಾರ ದೆಹಲಿಯ ಭಾರತ್ ಮಂಟಪಂನಲ್ಲಿ 8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (Pariksha Pe Charcha 2025) ಕಾರ್ಯಕ್ರಮ ನಡೆದಿದ್ದು, ಪ್ರಧಾನಿ ಮೋದಿಯವರು ದೇಶದ ಮೂಲೆ ಮೂಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆತ್ತವರೊಂದಿಗೆ ಸಂವಾದ ನಡೆಸಿದ್ದಾರೆ. ಪರೀಕ್ಷಾ ಒತ್ತಡ ನಿವಾರಣೆ ಕುರಿತು ಪಾಠ ಮಾಡಿದ್ದಾರೆ.
ಈ ಬಾರಿ ವಿದ್ಯಾರ್ಥಿಗಳೊಂದಿಗೆ ಸೆಲೆಬ್ರಿಟಿಗಳಾದ ಸದ್ಗುರು ಜಗ್ಗಿ ವಾಸುದೇವ್, ದೀಪಿಕಾ ಪಡುಕೋಣೆ, ಮೇರಿ ಕೋಮ್, ವಿಕ್ರಾಂತ್ ಮೆಸ್ಸಿ, ಅವನಿ ಲೇಖಾರರಂತಹ ಸಾಧಕರು ಕೂಡ ಸಂವಾದ ನಡೆಸಿ, ತಮ್ಮ ಜೀವನಾನುಭವವನ್ನು ಹಂಚಿಕೊಳ್ಳಲಿದ್ದಾರೆ.

ಪ್ರಸಕ್ತ ವರ್ಷ ಪರೀಕ್ಷಾ ಪೇ ಚರ್ಚಾಗೆ ದೇಶಾದ್ಯಂತ 3.30 ಕೋಟಿ ವಿದ್ಯಾರ್ಥಿಗಳು, 20.71 ಲಕ್ಷ ಶಿಕ್ಷಕರು, 5.51 ಲಕ್ಷ ಪೋಷಕರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು?
ಸಮಯದ ಪರಿಣಾಮಕಾರಿ ನಿರ್ವಹಣೆ:
ಸಮಯದ ಪರಿಣಾಮಕಾರಿ ಬಳಕೆಯ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದು, ವಿದ್ಯಾರ್ಥಿಗಳು ತಮ್ಮ ದಿನವನ್ನು ಮುಂಚಿತವಾಗಿ ಯೋಜಿಸಬೇಕು, ತಮ್ಮ ಇಷ್ಟದ ಸಬ್ಚೆಕ್ಟ್ ಅಥವಾ ವಿಷಯಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವ ಬದಲು, ತಮಗೆ ಕಷ್ಟವೆನಿಸಿರುವ, ಸವಾಲಿನ ವಿಷಯಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಪರೀಕ್ಷೆಗಳ ದಿನಾಂಕ ಘೋಷಣೆ!!
ಶಿಕ್ಷಕರಿಗೆ ಸಲಹೆ: ಶಿಕ್ಷಕರೆಲ್ಲರೂ ಸಲಹೆ ಕೊಡುವುದರ ಜೊತೆಗೆ ವಿದ್ಯಾರ್ಥಿಗಳ ಅನನ್ಯ ಸಾಮರ್ಥ್ಯಗಳನ್ನು ಸಕ್ರಿಯವಾಗಿ ಗುರುತಿಸಬೇಕು ಎಂದು ಪ್ರಧಾನಿ ಹೇಳಿದರು. ವಿದ್ಯಾರ್ಥಿಗಳು ಮೌಲ್ಯಯುತ ಮತ್ತು ಅರ್ಥಮಾಡಿಕೊಳ್ಳುವ ವಾತಾವರಣವನ್ನು ಬೆಳೆಸುವ ಮಹತ್ವದ ಬಗ್ಗೆಯೂ ತಿಳಿಹೇಳಿದರು.
ಪರೀಕ್ಷೆಗಳು ಮತ್ತು ಜ್ಞಾನ: ಪರೀಕ್ಷೆಗಳ ಮಹತ್ವವನ್ನು ಒಪ್ಪಿಕೊಂಡ ಪ್ರಧಾನಿ ಮೋದಿ, ಶೈಕ್ಷಣಿಕ ಪರೀಕ್ಷೆಗಳಷ್ಟೇ ನಿಜವಾದ ಕಲಿಕೆ ಎಂದು ತಪ್ಪಾಗಿ ಭಾವಿಸಬಾರದು. ಕೇವಲ ಪರೀಕ್ಷೆಗಳಿಗೆ ತಯಾರಿ ನಡೆಸುವ ಬದಲು ಜ್ಞಾನವನ್ನು ಗಳಿಸುವತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಹವ್ಯಾಸಗಳು ಮತ್ತು ಪಠ್ಯೇತರ ಚಟುವಟಿಕೆಗಳು: ಇದೇ ಸಂದರ್ಭದಲ್ಲಿ ಪೋಷಕರನ್ನುದ್ದೇಶಿಸಿ ಮಾತನಾಡಿದ ಮೋದಿ, ಮಕ್ಕಳಿಗೆ ತಮ್ಮ ಆಸಕ್ತಿಗಳನ್ನು ಅನ್ವೇಷಿಸಲು ಸ್ವಾತಂತ್ರ್ಯ ನೀಡಿ. ಅದರ ಅಗತ್ಯ ಹೆಚ್ಚಿದೆ. ವಿದ್ಯಾರ್ಥಿಗಳು ಕೇವಲ ಪುಸ್ತಕಗಳಿಗೆ ಮಾತ್ರ ಸೀಮಿತವಾಗಬಾರದು. ವಿವಿಧ ರೀತಿಯ ಹವ್ಯಾಸಗಳನ್ನು ರೂಢಿಸಿಕೊಂಡು, ಬೆಳೆಸಬೇಕು. ಅದಕ್ಕಾಗಿ ಸಮಯ ಮೀಸಲಿಡಬೇಕು ಎಂದರು.
ಒತ್ತಡ ನಿಭಾಯಿಸುವುದು: ಕ್ರಿಕೆಟ್ ಬಗ್ಗೆ ಉದಾಹರಣೆ ಕೊಟ್ಟ ಪ್ರಧಾನಿ ಮೋದಿ, ಬಾಹ್ಯ ಒತ್ತಡಕ್ಕಿಂತ ಹೆಚ್ಚಾಗಿ ತಮ್ಮ ಅಧ್ಯಯನದ ಮೇಲೆ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರೇಕ್ಷಕರ ಗದ್ದಲದ ನಡುವೆ ಬ್ಯಾಟ್ಸ್ ಮನ್ ಹೇಗೆ ಚೆಂಡಿನ ಮೇಲೆ ಗಮನ ಕೇಂದ್ರೀಕರಿಸುತ್ತಾನೋ, ಹಾಗೆಯೇ ವಿದ್ಯಾರ್ಥಿಗಳು ಒತ್ತಡದ ಬಗ್ಗೆ ಚಿಂತಿಸುವ ಬದಲು ಕಲಿಕೆಯತ್ತ ಗಮನ ಹರಿಸಬೇಕು ಎಂದರು.
ಆರೋಗ್ಯ, ನಿದ್ರೆ ಮತ್ತು ಆಹಾರ: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಸರಿಯಾದ ನಿದ್ರೆ ಮತ್ತು ಸಮತೋಲಿತ ಆಹಾರದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.