ಹಿಸಾರ್: ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಹರ್ಯಾಣದ ಟ್ರಾವೆಲ್ ಬ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಕ್ಕೆ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಜ್ಯೋತಿ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದ್ದು, ಇವರು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಜ್ಯೋತಿ ಮಲ್ಹೋತ್ರಾ ಅವರನ್ನು ಹಿಸಾರ್ನಲ್ಲಿ ಬಂಧಿಸಲಾಗಿದ್ದು, ಅವರ ವಿರುದ್ಧ ಆಫಿಶಿಯಲ್ ಸೀಕ್ರೆಟ್ಸ್ ಆಕ್ಟ್ 1923 ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಐದು ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ. ತನಿಖೆಯ ಪ್ರಕಾರ, 2023ರಲ್ಲಿ ಜ್ಯೋತಿ ವೀಸಾ ಪಡೆದು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ, ನವದೆಹಲಿಯ ಪಾಕಿಸ್ತಾನ ಹೈ ಕಮಿಷನ್ನ ಸಿಬ್ಬಂದಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಎಂಬವರ ಸಂಪರ್ಕಕ್ಕೆ ಬಂದಿದ್ದರು. ಡ್ಯಾನಿಶ್ನನ್ನು ಇತ್ತೀಚೆಗೆ ಭಾರತ ಸರ್ಕಾರ ಗಡಿಪಾರು ಮಾಡಿತ್ತು.
ಡ್ಯಾನಿಶ್ ಮೂಲಕ ಜ್ಯೋತಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಾದ ಶಾಕಿರ್ ಮತ್ತು ಇತರರನ್ನು ಭೇಟಿಯಾಗಿದ್ದರು. ಈ ಸಂಪರ್ಕವನ್ನು ರಹಸ್ಯವಾಗಿಡಲು ಶಾಕಿರ್ನ ಸಂಖ್ಯೆಯನ್ನು ‘ಜಟ್ ರಂಧಾವಾ’ ಎಂದು ಸೇವ್ ಮಾಡಿಕೊಂಡಿದ್ದರು. ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್ಚಾಟ್ನಂತಹ ಎನ್ಕ್ರಿಪ್ಟೆಡ್ ಆ್ಯಪ್ಗಳ ಮೂಲಕ ಇವರು ಸಂವಹನ ನಡೆಸುತ್ತಿದ್ದರು. ಜ್ಯೋತಿ ಭಾರತದ ಸೂಕ್ಷ್ಮ ಪ್ರದೇಶಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ್ದಲ್ಲದೆ, ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಸಕಾರಾತ್ಮಕ ಚಿತ್ರಣವನ್ನು ಬಿಂಬಿಸುವಂತೆ ಸೂಚನೆ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಯಾರು ಈ ಜ್ಯೋತಿ ಮಲ್ಹೋತ್ರಾ?
33 ವರ್ಷದ ಜ್ಯೋತಿ ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಅವರ ಚಾನೆಲ್ಗೆ 3.77 ಲಕ್ಷ ಚಂದಾದಾರರು ಇದ್ದು, ಇನ್ಸ್ಟಾಗ್ರಾಮ್ನಲ್ಲಿ 1.32 ಲಕ್ಷ ಫಾಲೋವರ್ಸ್ಗಳನ್ನು ಅವರು ಹೊಂದಿದ್ದಾರೆ. ಹಿಸಾರ್ನ ನಿವಾಸಿಯಾಗಿರುವ ಇವರು ತಮ್ಮನ್ನು ‘ನೊಮಾಡಿಕ್ ಲಿಯೋ ಗರ್ಲ್’ ಎಂದು ಕರೆದುಕೊಂಡಿದ್ದಾರೆ. ಇವರು 2023ರಲ್ಲಿ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಅಲ್ಲಿನ ಹಲವು ಸ್ಥಳಗಳ ವಿಡಿಯೋಗಳನ್ನು ತಮ್ಮ ಚಾನೆಲ್ನಲ್ಲಿ ಹಂಚಿಕೊಂಡಿದ್ದರು.
ತನಿಖೆಯಲ್ಲಿ ತಿಳಿದುಬಂದಿದ್ದೇನು:
2023ರಲ್ಲಿ ದೆಹಲಿಯ ಪಾಕಿಸ್ತಾನ ಹೈ ಕಮಿಷನ್ನ ಇಫ್ತಾರ್ ಕೂಟದಲ್ಲಿ ಜ್ಯೋತಿ ಭಾಗವಹಿಸಿದ್ದು, ಅಲ್ಲಿ ಡ್ಯಾನಿಶ್ ಮತ್ತು ಅವರ ಪತ್ನಿಯೊಂದಿಗೆ ಸಂವಾದ ನಡೆಸಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೋ ತನಿಖೆಗೆ ಪ್ರಮುಖ ಸಾಕ್ಷ್ಯವಾಗಿದೆ. ಜ್ಯೋತಿ ಜೊತೆಗೆ ಗುಜಾಲಾ, ಯಾಮೀನ್ ಮೊಹ್ದ್, ದೇವಿಂದರ್ ಸಿಂಗ್ ಧಿಲ್ಲೋನ್ ಮತ್ತು ಅರ್ಮಾನ್ ಎಂಬವರನ್ನು ಸಹ ಬಂಧಿಸಲಾಗಿದೆ. ಇವರು ಹಣಕಾಸು ವ್ಯವಹಾರ, ಸಿಮ್ ಕಾರ್ಡ್ ಪೂರೈಕೆ ಮತ್ತು ಮಾಹಿತಿ ಸಂಗ್ರಹಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ತನಿಖಾಧಿಕಾರಿಗಳು ಜ್ಯೋತಿ ಮತ್ತು ಇತರರನ್ನು ‘ಹನಿಟ್ರಾಪ್’ ಮೂಲಕ ಬಳಸಿಕೊಳ್ಳಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಜ್ಯೋತಿಯ ಸಾಮಾಜಿಕ ಮಾಧ್ಯಮದ ಪ್ರಭಾವವನ್ನು ಬಳಸಿ ತಮ್ಮ ದೇಶದ ಸಕಾರಾತ್ಮಕ ಚಿತ್ರಣವನ್ನು ಮೂಡಿಸಲು ಮತ್ತು ಭಾರತದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಜ್ಯೋತಿ ತಮ್ಮ ವಿಡಿಯೋಗಳಲ್ಲಿ ಅಟ್ಟಾರಿ ಗಡಿಯಿಂದ ಲಾಹೋರ್ನ ಬೀದಿಗಳವರೆಗೆ ಮತ್ತು ಕಟಾಸ್ ರಾಜ್ ದೇವಾಲಯದಂತಹ ಸ್ಥಳಗಳನ್ನು ತೋರಿಸಿದ್ದರು.



















