ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam attack) ನಡೆದು ಒಂದು ವಾರ ಆಗುತ್ತಿರುವಂತೆಯೇ ಪಾಕಿಸ್ತಾನದ ವಿರುದ್ಧ ಭಾರತದ ಪ್ರಹಾರ ಮುಂದುವರಿದಿದೆ. ಪಾಕಿಸ್ತಾನದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶವನ್ನು ನಿರ್ಬಂಧಿಸಿ ಬುಧವಾರ ರಾತ್ರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನದಲ್ಲಿ ನೋಂದಾಯಿಸಲ್ಪಟ್ಟ, ನಿರ್ವಹಿಸುವ ಅಥವಾ ಗುತ್ತಿಗೆ ಪಡೆದ ಎಲ್ಲಾ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿ ಭಾರತವು ನೋಟಾಮ್ (ವಾಯುಪಡೆಗೆ ನೋಟಿಸ್) ನೀಡಿದೆ.
ವಾಯುಪ್ರದೇಶವನ್ನು ಮುಚ್ಚುವ ಈ ನಿರ್ಧಾರವು ಏಪ್ರಿಲ್ 30ರಿಂದ ಮೇ 23, 2025 ರವರೆಗೆ ಜಾರಿಯಲ್ಲಿರುತ್ತದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದಿಂದ ಸಂಭವನೀಯ ಪ್ರತೀಕಾರದ ಆತಂಕದಿಂದಾಗಿ ಪಾಕಿಸ್ತಾನದ ವಿಮಾನಗಳು ಈಗಾಗಲೇ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸದೇ ಸಂಚಾರ ಆರಂಭಿಸಿವೆ.
ಆದರೆ, ಈಗ ಭಾರತ ಸರ್ಕಾರವೇ ಅಧಿಕೃತವಾಗಿ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿರುವುದರಿಂದ, ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳು ಕೌಲಾಲಂಪುರದಂತಹ ಆಗ್ನೇಯ ಏಷ್ಯಾದ ಸ್ಥಳಗಳನ್ನು ತಲುಪಲು ಚೀನಾ ಅಥವಾ ಶ್ರೀಲಂಕಾದಂತಹ ದೇಶಗಳ ಮೂಲಕ ಸುತ್ತು ಬಂದು ದೀರ್ಘ ಪಯಣ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಭಾರತದ ವಿಮಾನಗಳಿಗೆ ನಿರ್ಬಂಧಿಸಿತ್ತು.
ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವ ಭಾರತದ ನಿರ್ಧಾರವು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ತೆಗೆದುಕೊಂಡ ಪ್ರತೀಕಾರದ ಕ್ರಮಗಳ ಸರಣಿಯ ಭಾಗವಾಗಿದೆ. ಈಗಾಗಲೇ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ, ಪಾಕ್ ಪ್ರಜೆಗಳ ವೀಸಾ ರದ್ದು ಮಾಡುವ, ಅಟ್ಟಾರಿ-ವಾಘಾ ಗಡಿ ಪ್ರದೇಶ ಮುಚ್ಚುವ ಮುಂತಾದ ಪ್ರತೀಕಾರದ ಕ್ರಮಗಳನ್ನು ಕೈಗೊಂಡಿದೆ.



















