ಮುಂಬೈ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು (Pahalgam attack) ಅತ್ಯಂತ ಬೀಭತ್ಸ ಮತ್ತು ಕ್ರೂರ ದಾಳಿ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಬಣ್ಣಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ಹೋರಾಟಗಾರ. ಅವರು ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸ ಬಲ್ಲರು ಎಂದೂ ರಜನಿ ಅಭಿಪ್ರಾಯ ಪಟ್ಟಿದ್ದಾರೆ.
ಮುಂಬೈನಲ್ಲಿ ಗುರುವಾರ ನಡೆದ ವೇವ್ಸ್(ದಿ ವರ್ಲ್ಡ್ ಆಡಿಯೋ ವಿಶುವಲ್ ಆಂಡ್ ಎಂಟರ್ಟೈನ್ಮೆಂಟ್ ಸಮ್ಮಿಟ್ ) ಎಂಬ ಶೃಂಗದ ಉದ್ಘಾಟನೆ ನೆರವೇರಿಸಿ ಮಾತನಾಡಿರುವ ರಜನಿಕಾಂತ್, ಇದೊಂದು ಮನರಂಜನಾ ಕಾರ್ಯಕ್ರಮವಾಗಿರುವ ಕಾರಣ ಇದರ ಬಗ್ಗೆ ಅನಗತ್ಯ ಟೀಕೆಗಳು ಕೇಳಿ ಬಂದಿದ್ದವು. ಹಾಗಾಗಿ ಸರ್ಕಾರವು ಈ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಬಹುದು ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ, ಇದು ಖಂಡಿತಾ ಮುಂದೂಡಿಕೆ ಆಗಲ್ಲ, ನಡೆದೇ ನಡೆಯುತ್ತದೆ ಎನ್ನುವ ಭರವಸೆ ನನಗಿತ್ತು. ಅದಕ್ಕೆ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ನನಗಿರುವ ನಂಬಿಕೆ ಎಂದೂ ಹೇಳಿದ್ದಾರೆ.
“ಪ್ರಧಾನಿ ಮೋದಿ ಒಬ್ಬ ಹೋರಾಟಗಾರ. ಅವರು ಯಾವುದೇ ಸವಾಲನ್ನು ಸಮರ್ಥವಾಗಿ ಎದುರಿಸಬಲ್ಲರು. ಈಗಾಗಲೇ ಅದನ್ನು ಅವರು ಸಾಬೀತು ಮಾಡಿದ್ದಾರೆ. ಜೊತೆಗೆ ನಾವೂ ಕಳೆದ ಒಂದು ದಶಕದಿಂದ ಅದನ್ನು ನೋಡುತ್ತಿದ್ದೇವೆ” ಎಂದು ರಜನಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಕಾಶ್ಮೀರದ ಪರಿಸ್ಥಿತಿಯನ್ನು ಧೈರ್ಯವಾಗಿ, ಸಮರ್ಥವಾಗಿ ನಿಭಾಯಿಸಲಿದ್ದಾರೆ. ಕಾಶ್ಮೀರದಲ್ಲಿ ಅವರು ಶಾಂತಿ ಪುನಸ್ಥಾಪಿಸಲಿದ್ದಾರೆ. ದೇಶದಲ್ಲೂ ವೈಭವ ಮರುಕಳಿಸುವಂತೆ ಮಾಡಲಿದ್ದಾರೆ ಎಂದಿದ್ದಾರೆ.