ಬೆಳಗಾವಿ : ಕೋರ್ಟ್ ಕಲಾಪಕ್ಕೆ ಬಂದಿದ್ದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಕೋರ್ಟ್ ಕಲಾಪದ ವೇಳೆಯೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ನ್ಯಾಯಾಲಯದಲ್ಲಿ ಜರುಗಿದೆ. ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೀನಾಕ್ಷಿ ರಾಮಚಂದ್ರ ಶಿಂಧೆ (50) ಹಲ್ಲೆಗೊಳಗಾದ ಮಹಿಳೆ. ಬಾಬಾಸಾಹೇಬ್ ಚೌಹಾಣ್ ಹಲ್ಲೆ ಮಾಡಿದ ಆರೋಪಿ.
ಘಟನೆಯಲ್ಲಿ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಕೆಯನ್ನು ಅಥಣಿ ಸಮುದಾಯದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನ್ಯಾಯಾಲಯಕ್ಕೆ ಮೀನಾಕ್ಷಿ ಆಗಮಿಸಿದ್ದು, ಮಹಿಳೆಯನ್ನು ಕಂಡ ಆರೋಪಿ ಬಾಬಾಸಾಹೇಬ್ ಆಕೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಆರೋಪಿಯನ್ನು ಅಥಣಿ ಪೊಲಿಸರು ದಸ್ತಗಿರಿ ಮಾಡಿದ್ದಾರೆ.
ಘಟನೆ ವಿವರ : ಹಲ್ಲೆಗೆ ಒಳಗಾಗಿರುವ ಮಹಿಳೆ ಮೀನಾಕ್ಷಿ ಹಾಗೂ ಆರೋಪಿ ಬಾಬಾಸಾಹೇಬ್ ಮೂಲತಃ ಅಥಣಿ ತಾಲೂಕಿನ ಕೋತನಟ್ಟಿ ಗ್ರಾಮದವರು. ಇಬ್ಬರೂ ಸಂಬಂಧಿಕರಾಗಿದ್ದು, ಪಿತ್ರಾರ್ಜಿತ ಆಸ್ತಿಗಾಗಿ ಗಾಯಾಳು ಮೀನಾಕ್ಷಿ ಅವರು ನ್ಯಾಯಾಲಯದ ಮೂರೆ ಹೋಗಿದ್ದರು. ಆದರೆ, ಸೋದರತ್ತೆ ಪಿತ್ರಾರ್ಜಿತ ಆಸ್ತಿ ಕೇಳುತ್ತಿದ್ದಾಳೆ ಎಂದು ಸಿಟ್ಟಿಗೆದ್ದು, ಅಳಿಯ ಬಾಬಾಸಾಹೇಬ್ ಕೋರ್ಟ್ ಆವಣದಲ್ಲಿಯೇ ಆಕೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ, ಮೀನಾಕ್ಷಿ ಓಡಿ ಹೋಗಿ ಕೋರ್ಟ್ ಕಲಾಪ ನಡೆಸುತ್ತಿದ್ದ ನ್ಯಾಯಾಧೀಶರ ಮುಂದೆ ನಿಂತಿದ್ದಾಳೆ.
ಇದನ್ನೂ ಓದಿ : ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಾಸ್ಯ ನಟಿ ನಯನಾ ವಿರುದ್ಧ FIR!



















