ಭುವನೇಶ್ವರ : ಒಡಿಶಾ ಜಾಗೃತ ಇಲಾಖೆಯ ಅಧಿಕಾರಿಗಳು ಶುಕ್ರವಾರ ಭುವನೇಶ್ವರದ ಗ್ರಾಮೀಣ ಕಾರ್ಯ ವಿಭಾಗದ ಮುಖ್ಯ ಇಂಜಿನಿಯರ್ ಒಬ್ಬರ ಅಕ್ರಮವನ್ನು ಬಯಲಿಗೆ ಎಳೆದಿದೆ. ಈ ವೇಳೆ ಅವರು ಹಣವನ್ನು ಕಿಟಕಿಯಿಂದ ಹೊರಕ್ಕೆ ಎಸೆದ ಪ್ರಕರಣವೂ ನಡೆಯಿತು. ಅವರ ಬಳಿಯಿಂದ 2.1 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ಜಾಗೃತ ದಳ ತಿಳಿಸಿದೆ.
ಬೈಕುಂಠ ನಾಥ್ ಸಾರಂಗಿ ಭ್ರಷ್ಟ ಅಧಿಕಾರಿ, ಸಾರಂಗಿ ಅವರು ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಈ ದಾಳಿಗಳನ್ನು ನಡೆಸಲಾಗಿದೆ. ದಾಳಿಯ ಸಮಯದಲ್ಲಿ, ಸಾರಂಗಿ ಅವರು ಭುವನೇಶ್ವರದಲ್ಲಿರುವ ತಮ್ಮ ಫ್ಲಾಟ್ನ ಕಿಟಕಿಯಿಂದ 500 ಮುಖಬೆಲೆಯ ನೋಟುಗಳ ಕಂತೆಗಳನ್ನು ಹೊರಗೆ ಎಸೆದು ಬಚಾವಾಗಲು ಯತ್ನಿಸಿದ್ದ. “ಜಾಗೃತ ಇಲಾಖೆಯ ಅಧಿಕಾರಿಗಳು ಬಂದ ತಕ್ಷಣ, ಸಾರಂಗಿ ತಮ್ಮ ಫ್ಲಾಟ್ನ ಕಿಟಕಿಯಿಂದ ₹500 ನೋಟುಗಳ ಕಂತೆಗಳನ್ನು ಎಸೆದಿದ್ದಾರೆ. ಇದನ್ನು ಸಾಕ್ಷಿಗಳ ಸಮ್ಮುಖದಲ್ಲಿ ಜಾಗೃತ ತಂಡವು ವಶಪಡಿಸಿಕೊಂಡಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಿಢೀರ್ ಶೋಧವನ್ನು ಭುವನೇಶ್ವರ, ಅಂಗುಲ್ ಮತ್ತು ಪಿಪಿಲಿ (ಪುರಿ) ಸೇರಿದಂತೆ ಏಳು ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಸಲಾಯಿತು. ಭುವನೇಶ್ವರದ ದುಮದುಮಾದ ಒಂದು ಫ್ಲಾಟ್ನಿಂದ ಸುಮಾರು ₹1 ಕೋಟಿ ಮತ್ತು ಅಂಗುಲ್ ಜಿಲ್ಲೆಯ ಕರಡಗಡಿಯಾದಲ್ಲಿರುವ ಅವರ ಎರಡು ಅಂತಸ್ತಿನ ನಿವಾಸದಿಂದ ಸುಮಾರು ₹1.1 ಕೋಟಿ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಎಂಟು ಉಪ ಪೊಲೀಸ್ ಅಧೀಕ್ಷಕರು, 12 ಇನ್ಸ್ಪೆಕ್ಟರ್ಗಳು, ಆರು ಸಹಾಯಕ ಉಪ-ನಿರೀಕ್ಷಕರು ಮತ್ತು ಇತರ ಹಲವು ಸಿಬ್ಬಂದಿಗಳು ಭಾಗವಹಿಸಿದ್ದರು. ಅಂಗುಲ್ನ ವಿಶೇಷ ಜಾಗೃತ ನ್ಯಾಯಾಧೀಶರಿಂದ ಅನುಮತಿ ಪಡೆದು ಈ ತಪಾಸಣೆಗಳನ್ನು ನಡೆಸಲಾಯಿತು.
ಎಲ್ಲೆಲ್ಲಿ ತಪಾಸಣೆ?
ತಪಾಸಣೆಗೊಳಗಾದ ಸ್ಥಳಗಳಲ್ಲಿ ಅಂಗುಲ್ನಲ್ಲಿರುವ ಎರಡು ಅಂತಸ್ತಿನ ನಿವಾಸ ಮನೆ, ಭುವನೇಶ್ವರದಲ್ಲಿ ಒಂದು ಫ್ಲಾಟ್, ಪುರಿಯ ಸಿಯುಲಾದಲ್ಲಿ ಒಂದು ಫ್ಲಾಟ್, ಅಂಗುಲ್ನಲ್ಲಿ ಸಂಬಂಧಿಯ ಮನೆ, ಅಂಗುಲ್ನಲ್ಲಿ ಸಾರಂಗಿಯವರ ತಂದೆಯ ಮನೆ, ಅಂಗುಲ್ನಲ್ಲಿ ಎರಡು ಅಂತಸ್ತಿನ ತಂದೆಯ ಕಟ್ಟಡ ಮತ್ತು ಭುವನೇಶ್ವರದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿರುವ ಅವರ ಕಚೇರಿ ಕೊಠಡಿ ಸೇರಿವೆ.
ವಶಪಡಿಸಿಕೊಂಡ ನಗದನ್ನು ಎಣಿಕೆ ಯಂತ್ರಗಳನ್ನು ಬಳಸಿ ಎಣಿಕೆ ಮಾಡಲಾಗುತ್ತಿದೆ. “ಒಟ್ಟು ವಶಪಡಿಸಿಕೊಂಡ ಮೊತ್ತ ಸುಮಾರು 2.1 ಕೋಟಿ ರೂಪಾಯಿ,” ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಜಾಗೃತ ಇಲಾಖೆಯ ಅಧಿಕಾರಿಗಳು ದಾಳಿಗಳು ಇನ್ನೂ ಮುಂದುವರೆದಿರುವುದಾಗಿ ಮತ್ತು ಸಾರಂಗಿಯವರ ಆಸ್ತಿಗಳ ವಿವರವಾದ ಮೌಲ್ಯಮಾಪನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣ ಒಡಿಶಾದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ