ವಾರಂಗಲ್: ತೆಲಂಗಾಣದ ವಾರಂಗಲ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದ್ದ ತಾಯಿ-ಇಬ್ಬರು ಹೆಣ್ಣುಮಕ್ಕಳ ಮಕ್ಕಳ ‘ಆಕಸ್ಮಿಕ ಸಾವು’ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಈ ದುರಂತವು ಆಕಸ್ಮಿಕವಲ್ಲ, ಬದಲಾಗಿ ಗಂಡು ಮಗುವಿನ ವ್ಯಾಮೋಹಕ್ಕೆ ಬಿದ್ದ ಪತಿಯೇ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಈಜುಕೊಳಕ್ಕೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂಬ ಆಘಾತಕಾರಿ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಮೃತರನ್ನು 26 ವರ್ಷದ ಫರ್ಹತ್ ಮತ್ತು ಆಕೆಯ ಪುತ್ರಿಯರಾದ ಉಮೇರಾ (8) ಹಾಗೂ ಆಯೇಷಾ (6) ಎಂದು ಗುರುತಿಸಲಾಗಿದೆ. ವಾರಂಗಲ್-ಖಮ್ಮಂ ರಾಷ್ಟ್ರೀಯ ಹೆದ್ದಾರಿಯ ಸಮೀಪ ಈ ಕುಟುಂಬವು ಸ್ವಂತ ಈಜುಕೊಳವನ್ನು ಹೊಂದಿದ್ದು, ಅದನ್ನು ಬಾಡಿಗೆಗೆ ನೀಡುವ ಮೂಲಕ ಜೀವನ ಸಾಗಿಸುತ್ತಿತ್ತು. ಬುಧವಾರ ರಾತ್ರಿ ಇವರೆಲ್ಲರೂ ಈಜುಕೊಳದ ಬಳಿ ಇದ್ದಾಗ ಫರ್ಹತ್ ಮತ್ತು ಮಕ್ಕಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ ಎಂದು ಆರೋಪಿ ಪತಿ ಅಜರುದ್ದೀನ್ ಪೊಲೀಸರಿಗೆ ತಿಳಿಸಿದ್ದ. ಕೂಡಲೇ ಅವರನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
‘ಗಂಡು ಮಗುವಿನ ಆಸೆ’ಯೇ ಕಾರಣ
ಪೊಲೀಸ್ ತನಿಖೆಯ ವೇಳೆ ಅಜರುದ್ದೀನ್ ನೀಡಿದ್ದ ಹೇಳಿಕೆಗಳಲ್ಲಿ ಗೊಂದಲಗಳು ಕಂಡುಬಂದಿವೆ. ಫರ್ಹತ್ ಈಗ ಮತ್ತೆ ಗರ್ಭಿಣಿಯಾಗಿದ್ದು, ಸ್ಕ್ಯಾನಿಂಗ್ ವೇಳೆ ಅದು ಕೂಡ ಹೆಣ್ಣು ಮಗು ಎಂದು ತಿಳಿದುಬಂದಿತ್ತು ಎನ್ನಲಾಗಿದೆ. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದ ಕಾರಣ, ಅಜರುದ್ದೀನ್ ಗಂಡು ಮಗುವಿನ ಆಸೆ ಹೊಂದಿದ್ದ. ಹೀಗಾಗಿ ಪತ್ನಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಆದರೆ ಫರ್ಹತ್ ಇದಕ್ಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಫರ್ಹತ್ ತಂದೆ ಅಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಸಿಸಿಟಿವಿ ಆಫ್ ಮಾಡಿ ಕೃತ್ಯ ಎಸಗಿದ ಕಿರಾತಕ
ಈ ಹತ್ಯೆಯು ಪೂರ್ವಯೋಜಿತ ಎಂಬ ಸಂಶಯಕ್ಕೆ ಪೊಲೀಸರು ಹಲವು ಪುರಾವೆಗಳನ್ನು ಪತ್ತೆಹಚ್ಚಿದ್ದಾರೆ. ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ಈಜುಕೊಳದ ಬಳಿಯ ಸಿಸಿಟಿವಿ ಕ್ಯಾಮೆರಾಗಳನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿತ್ತು. ಅಲ್ಲದೆ, ಘಟನೆಯ ಸಮಯದಲ್ಲಿ ಅಜರುದ್ದೀನ್ ಫೋನ್ ಲೊಕೇಶನ್ ಈಜುಕೊಳದ ಬಳಿಯೇ ಇದ್ದದ್ದು ತನಿಖೆಯಲ್ಲಿ ದೃಢಪಟ್ಟಿದೆ. ತನ್ನ ಮಾತಿಗೆ ಒಪ್ಪದ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವನೇ ಈಜುಕೊಳಕ್ಕೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ವಾರಂಗಲ್ ಪೊಲೀಸರು ಆರೋಪಿ ಅಜರುದ್ದೀನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ.
ಇದನ್ನೂ ಓದಿ : ಆಂಬ್ಯುಲೆನ್ಸ್ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ



















