ಬೆಂಗಳೂರು: ಅಶ್ಲೀಲ ಕಮೆಂಟ್ ಮತ್ತು ಅತ್ಯಾಚಾರ ಬೆದರಿಕೆ ಆರೋಪದಡಿ 12 ಮಂದಿ ದರ್ಶನ್ ಅಭಿಮಾನಿಗಳ ವಿರುದ್ಧ ಮತ್ತೆ ಪ್ರಕರಣ ದಾಖಲಾಗಿದೆ.
ಈ ಹಿಂದೆ ನಟಿ ರಮ್ಯಾ, ಸೋನು ಶೆಟ್ಟಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಕಮೆಂಟ್ ಮತ್ತು ಬೆದರಿಕೆ ಹಾಕಿದ್ದ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದೀಗ ಮತ್ತೆ ಶಿಕ್ಷಕಿಯೊಬ್ಬರ ವಿರುದ್ಧ ಅಶ್ಲೀಲ ಕಮೆಂಟ್, ಅತ್ಯಾಚಾರ ಬೆದರಿಕೆ ಒಡ್ಡಿದ ಆರೋಪದಡಿ.ನಟ ದರ್ಶನ್ ಅವರ 12 ಮಂದಿ ಅಭಿಮಾನಿಗಳ ವಿರುದ್ಧ ಅಜಿತ್ ಆನಂದ್ ಹೆಗಡೆ ಎಂಬವರು ಗೋವಿಂದ ರಾಜನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಅಜಿತ್ ಆನಂದ್ ಹೆಗಡೆ ದೂರಿನ ಪ್ರಕಾರ ಸೆಪ್ಟೆಂಬರ್ 24ರಂದು ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ‘ಖದರ್ ಕನ್ನಡಿಗ ಎಂಬ ಫೇಸ್ ಬುಕ್ ಪೇಜ್ನಲ್ಲಿ ಅಶ್ಲೀಲವಾಗಿ ಸಂದೇಶ ಪ್ರಕಟಿಸಲಾಗಿದೆ.
ಹೆತ್ತವರ ಅನುಮತಿ ಇಲ್ಲದೆ ಪುಟ್ಟ ಮಕ್ಕಳ ಫೋಟೋಗಳನ್ನು ಕೂಡ ಬಳಸಿಕೊಂಡಿದ್ದಾರೆ.
ಗುರುತು ಮರೆ ಮಾಚದೆ ಕಿಡಿಗೇಡಿಗಳು ಪೋಸ್ಟ್ ಮಾಡಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ದೂರುದಾರರ ಪತ್ನಿಯು ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದು, ಗಣತಿ ಸಲುವಾಗಿ ಕರ್ತವ್ಯಕ್ಕೆ ಹೋಗಲು ಭಯದ ವಾತಾವರಣ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಪತ್ನಿಯ ಭದ್ರತೆ ಹಾಗೂ ಖಾಸಗಿತನಕ್ಕೆ ಧಕ್ಕೆ ಬಂದಿದ್ದು ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಅಜಿತ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಎಂದು ತಿಳಿದು ಬಂದಿದೆ.