ಬೆಂಗಳೂರು | ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧೆಡೆ ಕನ್ನಡ ರಾಜ್ಯೋತ್ಸವ ನವೆಂಬರ್ 1ಕ್ಕೆ ಮಾತ್ರ ಸೀಮಿತವಾಗದೇ ತಿಂಗಳಿಡೀ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದರಂತೆ ನಗರದ ಭೂಪಸಂದ್ರದ ಮುಖ್ಯ ರಸ್ತೆಯಲ್ಲಿರುವ ಎನ್.ಟಿ.ಐ. ಗೆಳೆಯರ ಬಳಗ ಯೂತ್ ಅಸೋಸಿಯೇಷನ್ (ರಿ) ಸತತ 16 ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದೆ.

ಅಂತೆಯೇ ಈ ವರ್ಷವೂ ಕೂಡ ಕನ್ನಡ ರಾಜ್ಯೋತ್ಸವ ಆಚರಣೆಯ ಜೊತೆಗೆ ಅಣ್ಣಮ್ಮ ದೇವಿಯ ಅದ್ಧೂರಿ ಉತ್ಸವವನ್ನು ಎನ್.ಟಿ.ಐ. ಗೆಳೆಯರ ಬಳಗ ಹಮ್ಮಿಕೊಂಡಿದ್ದು, ಇದೇ ಬರುವ ನ.21 ರಿಂದ 23ರವರೆಗೆ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಆಚರಿಸಲಾಗುತ್ತಿದೆ. ಈ ಬಗ್ಗೆ ಎನ್.ಟಿ.ಐ ಗೆಳೆಯರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಕ್ರಮದ ವಿವರ :
ನ.21 ಶುಕ್ರವಾರದಂದು ಬೆಳಿಗ್ಗೆ 10:30ಕ್ಕೆ ನಗರ ದೇವತೆ ಶ್ರೀ ಅಣ್ಣಮ್ಮ ದೇವಿಯ ಪ್ರತಿಷ್ಠಾಪನೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 1:00ಕ್ಕೆ ಅನ್ನ ಸಂತರ್ಪಣಾ ಕಾರ್ಯಕ್ರಮ, ಸಂಜೆ 6-30ಕ್ಕೆ ಮಹಾಮಂಗಳಾರತಿ ಹಾಗೂ ದೇವಿಯ ಪ್ರಸಾದ ವಿತರಿಸಲಾಗುತ್ತದೆ.
ನ.22 ಶನಿವಾರ ಬೆಳಿಗ್ಗೆ 9:00ಕ್ಕೆ ಕನ್ನಡ ಬಾವುಟ ಧ್ವಜಾರೋಹಣ ಹಾಗೂ ಸಂಜೆ 5-30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದ್ದು, ಸಂಜೆ 6-00ಕ್ಕೆ ಕರ್ನಾಟಕದ ಹೆಸರಾಂತ ಶೈನಿಂಗ್ ಸ್ಟಾರ್ ಮೆಲೋಡಿ ಗೈಸ್ ಆರ್ಕೇಸ್ಟ್ರಾ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಸಂಜೆ 7:30ಕ್ಕೆ ಬಡ ಮಕ್ಕಳಿಗೆ ಪುಸ್ತಕ ವಿತರಿಸಲಾಗುತ್ತದೆ.
ನ.23ರಂದು ಭಾನುವಾರ, ಬೆಳಿಗ್ಗೆ 10-30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಸಂಜೆ 5-30ಕ್ಕೆ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾತಂಡಗಳಾದ ಕೀಲು ಕುದುರೆ, ತಮಟೆ ವಾದ್ಯ ಹಾಗೂ ಮತ್ತಿತರ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಹೂವಿನ ಪಲ್ಲಕ್ಕಿಯೊಂದಿಗೆ ಶ್ರೀ ಅಣ್ಣಮ್ಮ ದೇವಿಯ ಅದ್ದೂರಿ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ : ಹೋಂಡಾದಿಂದ ಗ್ರಾಹಕರಿಗೆ ಶಾಕ್ : CBR1000RR-R ಫೈರ್ಬ್ಲೇಡ್ ಮತ್ತು ರೆಬೆಲ್ 500 ಭಾರತದ ವೆಬ್ಸೈಟ್ನಿಂದ ದಿಢೀರ್ ಮಾಯ!



















