ಬೆಂಗಳೂರು: ಸಿನೆಮಾ ನಿರ್ಮಿಸುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚಿಸುರವ ಆರೋಪಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ಪರಭಾಷೆಯಲ್ಲಿ ಸಿನೆಮಾ ಮಾಡುವುದಿಲ್ಲ ಅಂದಿದ್ದಕ್ಕೆ ನೋಟಿಸ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ಹೆಗ್ಡೆ ಜೂನ್ 8ರಂದು ಬಂದು ನಮ್ಮನ್ನು ಮೀಟ್ ಮಾಡಿ ಮಾತಾಡಿ ಹೋಗಿದ್ದರು. ಇದು ಸೈನಿಕರ ಬಗ್ಗೆ ಸಿನೆಮಾ ಆದ್ದರಿಂದ ಬಜೆಟ್ ಜಾಸ್ತಿಯಾಗುತ್ತದೆ. ಕನ್ನಡದಲ್ಲಿ ಸಿನಿಮಾ ಮಾಡುವುದು ಬೇಡ. ಕನ್ನಡದಲ್ಲಿ ಸರಿಯಾಗಿ ಬ್ಯುಸಿನೆಸ್ ಆಗಲ್ಲ. ತಮಿಳು ಅಥವಾ ತೆಲುಗಿನಲ್ಲಿ ಸಿನೆಮಾ ನಿರ್ಮಿಸುವ ಎಂದು ಹೇಳಿದ್ದರು. ಇಲ್ಲ ಕನ್ನಡದಲ್ಲೇ ಮೊದಲು ನಿರ್ಮಿಸಬೇಕು. ಕನ್ನಡಕ್ಕೆ ಆದ್ಯತೆ ನೀಡಿ ಎಂದು ಧ್ರುವ ಸರ್ಜಾ ಹೇಳಿದ್ದರು. ಇದಕ್ಕೆ ಒಪ್ಪದ ರಾಘವೇಂದ್ರ, ಜೂನ್ 10ಕ್ಕೆ ಮುಂಬೈ ಕೋರ್ಟ್ ನಿಂದ ನೋಟಿಸ್ ಕಳುಹಿಸಿದ್ದಾರೆ. ಜೂನ್ 15ಕ್ಕೆ ನೋಟಿಸ್ಗೆ ನಾವು ಉತ್ತರವನ್ನು ಕೊಟ್ಟಿದ್ದೇವೆ. ನಮ್ಮ ಕಡೆಯ ಲಾಯರ್ ಕೂಡ ಈಗ ಮಾತುಕತೆಯಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲಿಗೆ ರಾಘವೇಂದ್ರ ಹೆಗ್ಡೆ ಅವರು 2018ರಲ್ಲಿ ನಮ್ಮನ್ನು ಭೇಟಿ ಮಾಡಿ, ಮುಂಗಡವಾಗಿಯೂ ಹಣ ಕೊಟ್ಟಿದ್ದರು. ನಾವು ಅವರಿಗೆ ಸಿಗಲಿಲ್ಲ ಎನ್ನುವುದು ತಪ್ಪು ಮಾಹಿತಿ. 2018ರಲ್ಲಿ ಭೇಟಿಯಾದಾಗ ಸೈನಿಕರ ಬಗ್ಗೆ ಸಿನೆಮಾ ಮಾಡಬೇಕೆಂದು ಹೇಳಿದ್ದರು. ಇದಕ್ಕೆ 3 ಕೋಟಿ 15 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಅವರು ನಂದಿನಿ ಎಂಟರ್ಟೈನ್ಮೆಂಟ್ನಿಂದ 20 ಲಕ್ಷ ರೂ. ಹಣ ಕೊಟ್ಟಿದ್ದರು. ನಂದಿನಿ ಎಂಟರ್ಟೈನ್ಮೆಂಟ್ ಜೊತೆಗೆ ಸಮಸ್ಯೆ ಆದಾಗ 20 ಲಕ್ಷ ರೂ. ಹಣವನ್ನು ನಾವು ವಾಪಾಸ್ ಕೊಟ್ಟಿದ್ದೇವೆ. ಕಥೆ ರೆಡಿ ಮಾಡಿಕೊಂಡು ಬಂದು ಸಿಗ್ತೇವೆ ಎಂದು ಹೇಳಿದ್ದರು. ಧ್ರುವ ಸರ್ಜಾ ತಂಡದಿಂದ ಮೂರು ತಿಂಗಳಿಗೊಮ್ಮೆ ಕರೆ ಮಾಡಿದಾಗ ಕಥೆ ಇನ್ನೂ ಸಿದ್ಧವಾಗ್ತಿದೆ ಎಂದು ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.
ಹೀಗೆ 5 ವರ್ಷಗಳಿಂದ ಹೇಳಿ ಕೊನೆಗೆ ಮೊದಲಾರ್ಧ ಕಥೆಯನ್ನು ಕಳುಹಿಸಿದ್ದಾರೆ. ಸೆಕೆಂಡ್ ಹಾಫ್ ಕಥೆ ಎಷ್ಟು ಬಾರಿ ಫಾಲೋಅಪ್ ಮಾಡಿದ್ರೂ ಸಿಗಲಿಲ್ಲ. ಅವರ ಜೊತೆ ಕೋ-ಆರ್ಡಿನೇಟ್ ಮಾಡುವುದಕ್ಕೆ ಒಬ್ಬರನ್ನ ನೇಮಿಸಿದ್ದೇವು. ಫಿಲ್ಮ್ ಶೂಟಿಂಗ್ ಸೆಟ್ ಬಳಿ ಬಂದು ಧ್ರುವ ಸರ್ಜಾ ಅವರೊಂದಿಗೆ ಮಾತುಕತೆ ನಡೆಸಿದ್ದರು. ನಾನು ಬೇರೆ ಬೇರೆ ಸೀರಿಯಲ್ಗಳಲ್ಲಿ ಬ್ಯುಸಿ ಇದ್ದೇನೆ ಎಂದು ಹೇಳಿ, ಅವರೇ ದೂರ ಸರಿಯುತ್ತಿದ್ದರು ಎಂದಿದ್ದಾರೆ.