ಬೆಂಗಳೂರು | ಕೇಂದ್ರ ಸರ್ಕಾರದ ಭಾರತ್ ಟ್ಯಾಕ್ಸಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಬೇಕು ಎಂದು ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಒತ್ತಾಯಿಸಿದ್ದು, ಈ ಸಂಬಂಧ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಭಾರತ್ ಟ್ಯಾಕ್ಸಿ ಯೋಜನೆಯೊಂದಿಗೆ ಖಾಸಗಿ ಕ್ಯಾಬ್ (ಓಲಾ-ಉಬರ್) ಕಂಪನಿಗಳಿಗೆ ಪಾರದರ್ಶಕ ಮತ್ತು ಸರಕಾರಿ ನಿಯಂತ್ರಿತ ಪರ್ಯಾಯ ದೊರೆಯುತ್ತದೆ. ಆದರೆ ಒಕ್ಕೂಟವು ಬೈಕ್ ಟ್ಯಾಕ್ಸಿಗಳು ಮತ್ತು ಇತರ ದ್ವಿಚಕ್ರ ವಾಹನಗಳನ್ನು ಈ ಯೋಜನೆಯಿಂದ ಹೊರಗಿಡಬೇಕು ಎಂಬ ಅಭಿಪ್ರಾಯವನ್ನು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ವ್ಯಕ್ತಪಡಿಸಿದೆ.

ಈಗಾಗಲೇ ಕೇಂದ್ರ ಸರ್ಕಾರದಿಂದ ದೆಹಲಿಯ NCR ಪ್ರದೇಶದಲ್ಲಿ ಭಾರತ್ ಟ್ಯಾಕ್ಸಿ ಸೇವೆ ಆರಂಭವಾಗಿದ್ದು, ಆಟೋ, ಟ್ಯಾಕ್ಸಿ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗುತ್ತಿದೆ.

ಖಾಸಗಿ ಅಗ್ರಿಗೇಟ್ ಕಂಪನಿಗಳಿಂದ ನಷ್ಟದಲ್ಲಿರುವ ಚಾಲಕರು, ಖಾಸಗಿ ಕಂಪನಿಗಳ ಆ್ಯಪ್ ಮೂಲಕ 20-35%ನಷ್ಟು ಕಮಿಷನ್ ಪಡೆದುಕೊಳ್ಳಲಾಗುತ್ತಿದೆ. ಆದ್ರೆ, ಭಾರತ್ ಟ್ಯಾಕ್ಸಿ ಸೇವೆ ಸರ್ಕಾರ ನಿಯಂತ್ರಿತ ಆ್ಯಪ್ ಆಗಿದ್ದು, ಯಾವುದೇ ಕಮಿಷನ್ ಇರುವುದಿಲ್ಲ. ಇದನ್ನ ಜಾರಿ ಮಾಡಿದ್ರೆ ಏಕೀಕೃತವಾದ ನಿಯಮ ಜಾರಿಗೆ ಬರಲಿದೆ. ಹೀಗಾಗಿ ರಾಜ್ಯದಲ್ಲಿ ಸಹ ಭಾರತ್ ಟ್ಯಾಕ್ಸಿ ಸೇವೆಯನ್ನು ಜಾರಿಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಸಚಿವರು ಒಕ್ಕೂಟದ ಮನವಿಯನ್ನು ಸ್ವೀಕರಿಸಿ, ವಿಚಾರಣೆಯ ನಂತರ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ. ಇದರೊಂದಿಗೆ, ರಾಜ್ಯದ ಖಾಸಗಿ ಟ್ಯಾಕ್ಸಿ ಚಾಲಕರು ಹೆಚ್ಚು ಲಾಭ, ಸುರಕ್ಷತೆ ಮತ್ತು ನಿರಂತರ ಆದಾಯವನ್ನು ಪಡೆಯುವ ಅವಕಾಶ ಹೊಂದಿದ್ದಾರೆ. ಭಾರತ್ ಟ್ಯಾಕ್ಸಿ ಯೋಜನೆ ಜಾರಿಗೆ ಬಂದರೆ, ಇದು ಕರ್ನಾಟಕದಲ್ಲಿ ಖಾಸಗಿ ಟ್ಯಾಕ್ಸಿ ಸೇವೆಯನ್ನು ಹೆಚ್ಚು ಪಾರದರ್ಶಕ, ವಿಶ್ವಾಸಾರ್ಹ ಮತ್ತು ಪ್ರಯಾಣಿಕರಿಗೂ ಅನುಕೂಲಕರವಾಗಿಸಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಮುಂದೇನಾಗುತ್ತೆ ಎಂದು ಕಾದುನೋಡಬೇಕಿದೆ.
ಇದನ್ನೂ ಓದಿ : ‘ನಂದಿನಿ’ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ!



















