ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡುವವರಿಗೆ 25,000 ರೂಪಾಯಿಗಳ ಬಹುಮಾನ ನೀಡುವ ‘ರಾಹ್ವೀರ್ ಯೋಜನೆ’ಯನ್ನು ಸೋಮವಾರ ಘೋಷಿಸಿದ್ದಾರೆ. ಈ ಯೋಜನೆಯು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮಾತ್ರವಲ್ಲದೆ, ಜಿಲ್ಲಾ, ನಗರ, ಮತ್ತು ಗ್ರಾಮ ಪಂಚಾಯಿತಿ ರಸ್ತೆಗಳಲ್ಲಿಯೂ ಜಾರಿಯಲ್ಲಿರುತ್ತದೆ.
ನಾಗ್ಪುರದ ರಾಮ್ನಗರದ ಚಿತ್ನಾವಿಸ್ ಸೆಂಟರ್ನಲ್ಲಿ ನಡೆದ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಗಡ್ಕರಿ ಈ ಘೋಷಣೆ ಮಾಡಿದ್ದಾರೆ.
ಅಪಘಾತ ಸಂತ್ರಸ್ತರನ್ನು ಅಪಘಾತದ ಮೊದಲ ಗಂಟೆಯೊಳಗೆ (ಗೋಲ್ಡನ್ ಅವರ್) ಆಸ್ಪತ್ರೆಗೆ ಕರೆದೊಯ್ಯುವವರಿಗೆ ಪ್ರಸ್ತುತ 5 ಸಾವಿರ ರೂ.ಗಳ ಬಹುಮಾನ ನೀಡಲಾಗುತ್ತದೆ. ಆದರೆ, ಈ ಮೊತ್ತವು ಅತ್ಯಲ್ಪವಾಗಿದೆ ಎಂದಿರುವ ಸಚಿವ ಗಡ್ಕರಿ, ಅಪಘಾತವಾದ ಮೊದಲ ಗಂಟೆಯಲ್ಲಿ ತಕ್ಷಣದ ವೈದ್ಯಕೀಯ ನೆರವು ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೀಗಾಗಿ, ಬಹುಮಾನದ ಮೊತ್ತವನ್ನು ಐದು ಪಟ್ಟು ಹೆಚ್ಚಿಸಿ 25,000 ರೂಪಾಯಿಗಳಿಗೆ ಏರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 2021ರಲ್ಲಿ ಆರಂಭವಾದ ಗುಡ್ ಸಮಾರಿಟನ್ ಯೋಜನೆಯಡಿ, ಯಾವುದೇ ಪಾವತಿ ಅಥವಾ ಬಹುಮಾನದ ಆಸೆಯಿಲ್ಲದೆ ಸ್ವಯಂಪ್ರೇರಿತವಾಗಿ ಅಪಘಾತ ಸಂತ್ರಸ್ತರಿಗೆ ತಕ್ಷಣದ ನೆರವು ನೀಡುವವರಿಗೆ ಈ ಬಹುಮಾನವನ್ನು ನೀಡಲಾಗುತ್ತದೆ. ಈ ಯೋಜನೆಯು ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯುವವರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ರಾಹ್ವೀರ್ ಯೋಜನೆಯು ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವ ಮತ್ತು ಸಮಾಜದಲ್ಲಿ ಸಹಾನುಭೂತಿಯ ಸಂಸ್ಕೃತಿಯನ್ನು ಬೆಳೆಸುವ ಗಡ್ಕರಿ ಅವರ ವಿಶಾಲ ದೃಷ್ಟಿಕೋನದ ಭಾಗವಾಗಿದೆ. ಈ ಯೋಜನೆಯು ತಕ್ಷಣದ ಸಹಾಯವನ್ನು ಒದಗಿಸಲು ಜನರನ್ನು ಪ್ರೇರೇಪಿಸುವ ಮೂಲಕ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವುಗಳನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.
ಇದೇ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಸಾಮಾಜಿಕ ಕಾರ್ಯಕರ್ತರು ಮತ್ತು ಎನ್ಜಿಒಗಳು ಸಕ್ರಿಯವಾಗಿ ಕೊಡುಗೆ ನೀಡಬೇಕೆಂದು ಗಡ್ಕರಿ ಮನವಿ ಮಾಡಿದ್ದಾರೆ. ಇದೇ ವೇಳೆ, ಸರ್ಕಾರವು ರಸ್ತೆ ಅಪಘಾತ ಸಂತ್ರಸ್ತರಿಗೆ ಏಳು ದಿನಗಳವರೆಗೆ 1.5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ‘ಕ್ಯಾಶ್ಲೆಸ್ ಟ್ರೀಟ್ಮೆಂಟ್’ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದೆ. ಅಪಘಾತದ 24 ಗಂಟೆಗಳೊಳಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಈ ಸೌಲಭ್ಯವನ್ನು ಪಡೆಯಬಹುದು. ಹಿಟ್-ಅಂಡ್-ರನ್ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಸಹ ನೀಡಲಾಗುತ್ತದೆ ಎಂದಿದ್ದಾರೆ.