ಬೆಂಗಳೂರು | ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA)ದ ವ್ಯಾಪ್ತಿಯಲ್ಲಿ ಮುಂಗಾರು ಮಳೆಯ ಮುನ್ನ ಪೂರ್ವಸಿದ್ಧತೆ ಕೈಗೊಳ್ಳುವಂತೆ GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಎಲ್ಲಾ ಐದು ನಗರ ಪಾಲಿಕೆಗಳಿಗೆ ಸುತ್ತೋಲೆ ಮೂಲಕ ಸೂಚನೆ ನೀಡಿದ್ದು, ಪ್ರವಾಹ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯಗೊಳಿಸಿದ್ದಾರೆ.

ವಿಪತ್ತು ನಿರ್ವಹಣೆಯ ಹೊಣೆಗಾರಿಕೆಯನ್ನು ಐದು ಪಾಲಿಕೆ ಆಯುಕ್ತರಿಗೆ ನೀಡಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಂಚಿತ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಹಿಂದಿನ 209 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗ 49 ಪ್ರದೇಶಗಳು ಅಪಾಯ ಪಟ್ಟಿಯಲ್ಲಿ ಇರುವುದರಿಂದ ಅವುಗಳಿಗೆ ಶಾಶ್ವತ ಪರಿಹಾರ ಒದಗಿಸಲು ಆದೇಶಿಸಲಾಗಿದೆ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಲಾಗಿದೆ.
ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಏಪ್ರಿಲ್ ಅಂತ್ಯದೊಳಗೆ ಚರಂಡಿ ಮತ್ತು ಡ್ರೈನ್ಗಳ ಹೂಳೆತ್ತುವ ಕಾರ್ಯ ಪೂರ್ಣಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ನಿಯಂತ್ರಣ ಕೊಠಡಿಗಳಲ್ಲಿ BESCOM ಹಾಗೂ ಜಲಮಂಡಳಿ ಅಧಿಕಾರಿಗಳನ್ನು ನಿಯೋಜಿಸುವುದು, SDRF ಮತ್ತು NDRF ತಂಡಗಳ ಪಟ್ಟಿಯನ್ನು ಸಿದ್ಧಪಡಿಸುವುದು ಹಾಗೂ ಅಗ್ನಿಶಾಮಕ ದಳದೊಂದಿಗೆ ಸಮನ್ವಯ ಸಾಧಿಸುವಂತೆ ತಿಳಿಸಲಾಗಿದೆ.
ಇನ್ನು, ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿ ಏಪ್ರಿಲ್ ಒಳಗೆ ಪೂರ್ಣಗೊಳಿಸುವುದರೊಂದಿಗೆ ಸಾಯಿ ಲೇಔಟ್, ಪೈ ಲೇಔಟ್ ಮತ್ತು HBR ಲೇಔಟ್ ಪ್ರದೇಶಗಳ ಪ್ರವಾಹ ಸಮಸ್ಯೆ ಪರಿಹಾರಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಮರಗಳು ಬೀಳುವುದನ್ನು ತಪ್ಪಿಸಲು ವಿಶೇಷ ತಂಡಗಳನ್ನು ರಚಿಸಿ ಅಪಾಯಕಾರಿ ಕೊಂಬೆಗಳನ್ನು ಮುಂಚಿತವಾಗಿ ತೆರವುಗೊಳಿಸುವುದರ ಜೊತೆಗೆ ನಾಗರಿಕರ ದೂರುಗಳಿಗೆ ತ್ವರಿತ ಸ್ಪಂದನೆ ನೀಡಬೇಕು. ಪಣತ್ತೂರು ‘S’ ಕ್ರಾಸ್, ಸಿಲ್ಕ್ ಬೋರ್ಡ್, ಮಡಿವಾಳ ಮತ್ತು ರಾಜರಾಜೇಶ್ವರಿನಗರ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲು ಸೂಚಿಸಲಾಗಿದೆ.
ಜೊತೆಗೆ ವೈಟ್ಟಾಪಿಂಗ್ ರಸ್ತೆಗಳಲ್ಲೂ ಡ್ರೈನೇಜ್ ವ್ಯವಸ್ಥೆ ಪೂರ್ಣಗೊಳಿಸುವುದು, ಸಿಲ್ಟ್ ಚೇಂಬರ್ ಹಾಗೂ ಗ್ರೇಟಿಂಗ್ಸ್ಗಳನ್ನು ಸ್ವಚ್ಛಗೊಳಿಸುವುದು ಮತ್ತು ಇತರೆ ಇಲಾಖೆಗಳ ಕಾಮಗಾರಿಗಳೊಂದಿಗೆ ಸಮನ್ವಯ ಸಾಧಿಸಿ ರಸ್ತೆ ಪುನರ್ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ ; ಭಾರತಕ್ಕೀಗ ಇಂಟರ್ನೆಟ್ ಭೀತಿ.. ಇರಾನ್ ಯುದ್ಧದಿಂದ ಡಿಜಿಟಲ್ ಲೋಕಕ್ಕೆ ಕಾದಿದೆಯೇ ಸಂಕಷ್ಟ?



















