ನವದೆಹಲಿ : ಕೇವಲ ಅಭಿವೃದ್ಧಿಯಿಂದ ಚುನಾವಣೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರಬೇಕು ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
“ಕೇವಲ ಅಭಿವೃದ್ಧಿ ಕೆಲಸಗಳಿಂದ ಚುನಾವಣೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಸಂಸದರಿಗೆ ಜನರೊಂದಿಗೆ ನೇರ ಸಂಪರ್ಕ ಹಾಗೂ ತೊಡಗಿಸಿಕೊಳ್ಳುವಿಕೆಯಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ’ ಎಂದು ನಮೋ ಹೇಳಿದ್ದಾರೆ.
ಜನವರಿಯಿಂದ ಆಗಸ್ಟ್ವರೆಗೆ ಬಿಜೆಪಿ ಸಂಸದರ ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಗಳನ್ನು ವಿವರಿಸುವ ಮೂರು ಪುಟಗಳ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನಿಯೂ ಹಾಜರಿದ್ದರು.
ಫೇಸ್ಬುಕ್, ಇನ್ಸ್ಟಾಗ್ರಾಮ್, ಎಕ್ಸ್ ಹಾಗೂ ಯೂಟ್ಯೂಬ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ, ಮೈಕ್ರೋ ಬ್ಲಾಗಿಂಗ್ ಖಾತೆಗಳಲ್ಲಿ ಪೋಸ್ಟ್ಗಳನ್ನು ಗಮನದಲ್ಲಿಟ್ಟುಕೊಂಡು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಅದರಂತೆ ಒಂದು ತಿಂಗಳಲ್ಲಿ ಫೇಸ್ಬುಕ್ನಲ್ಲಿ ಯಾವುದೇ ಪೋಸ್ಟ್ಗಳನ್ನು ಮಾಡದ ಸಂಸದರನ್ನು ‘ನಿಷ್ಕ್ರಿಯ’ ಎಂದು ಟ್ಯಾಗ್ ಮಾಡಲಾಗಿದ್ದು, ಕೆಂಪು ಎಂದು ಗುರುತಿಸಲಾಗಿದೆ. ಒಂದು ತಿಂಗಳಲ್ಲಿ 60ಕ್ಕಿಂತ ಕಡಿಮೆ ಪೋಸ್ಟ್ಗಳನ್ನು ಮಾಡಿದವರನ್ನು ಕೇವಲ ಸಕ್ರಿಯ’ ಎಂದು ಟ್ಯಾಗ್ ಮಾಡಲಾಗಿದ್ದು, ಹಳದಿ ಎಂದು ಗುರುತಿಸಲಾಗಿದೆ. 60ಕ್ಕೂ ಹೆಚ್ಚು ಪೋಸ್ಟ್ಗಳನ್ನು ಮಾಡಿದವರನ್ನು ‘ಸಕ್ರಿಯ’ ಎಂದು ಟ್ಯಾಗ್ ಮಾಡಲಾಗಿದ್ದು, ಹಸಿರು ಎಂದು ಗುರುತಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಸಕ್ರಿಯರಾಗಿದ್ದ ಸಂಸದರಿಗೆ ತಮ್ಮ ಪೋಸ್ಟ್ಗಳನ್ನು ಹೆಚ್ಚಿಸಿಕೊಳ್ಳುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕಾರ್ಯಾಗಾರದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಂಸದರು ಮತ್ತು ಶಾಸಕರು ಜನರನ್ನು ತಲುಪಲು ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ವಿವರಿಸಿದ್ದಾರೆ.