ಬೆಂಗಳೂರು: ರಾಜ್ಯದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗಳು ಹಲವು ರೈತ ವಿರೋಧಿ ನೀತಿಯಿಂದಾಗಿ ನಷ್ಟದಿಂದಾಗಿ ಬಳಲುತ್ತಿದ್ದವು. ಹೀಗಾಗಿ ಹಲವು ಎಪಿಎಂಸಿಗಳು ಮುಚ್ಚುವ ಸ್ಥಿತಿಗೆ ಬಂದು ನಿಂತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕ ಎಪಿಎಂಸಿ ಮಾರುಕಟ್ಟೆಗಳು ಪುನಃಶ್ಚೇತನಗೊಂಡು ಆರ್ಥಿಕವಾಗಿ ಸುಧಾರಣೆ ಕಾಣುತ್ತಿವೆ.
ರಾಜ್ಯದಲ್ಲಿ ಸುಮಾರು 167 ಎಪಿಎಂಸಿ ಮಾರುಕಟ್ಟೆಗಳಿವೆ. ಈ ಪೈಕಿ ಸುಮಾರು 40ಕ್ಕೂ ಅಧಿಕ ಮಾರುಕಟ್ಟೆಗಳು ಕಳೆದ ಎರಡು ವರ್ಷಗಳಿಂದ ನಿರ್ವಹಣೆಗೂ ಹಣವಿಲ್ಲದೆ ಮುಚ್ಚುವ ಸ್ಥಿತಿಗೆ ಬಂದು ನಿಂತಿದ್ದವು. ಆದರೆ, ಈಗ ಮಾರುಕಟ್ಟೆಯ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಮೈಕೊಡವಿ ಎದ್ದು ನಿಂತಿವೆ.
2020ರ ನಂತರ ಮುಕ್ತ ಮಾರುಕಟ್ಟೆ ಪದ್ಧತಿ ಜಾರಿಗೆ ತರಲಾಗಿತ್ತು. ಹೀಗಾಗಿ ಎಪಿಎಂಸಿ ವರ್ತಕರು, ಕಾನೂನು ಬದ್ಧವಾಗಿ ಪರವಾನಗಿ ಪಡೆದವರು, ವ್ಯಾಪಾರವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದರು. ರೈತರು ತಮ್ಮ ಉತ್ಪನ್ನಗಳನ್ನು ಪರವಾನಗಿಯಿಲ್ಲದ ವರ್ತಕರಿಗೆ ಮಾರಾಟ ಮಾಡಿದಾಗ ತೂಕ ಹಾಗೂ ಹಣದ ವಿತರಣೆಯಲ್ಲಿ ವಂಚನೆಯಾದರೆ ಅದಕ್ಕೆ ಜವಾಬ್ದಾರಿ ಹೊರುವವರು ಇಲ್ಲ ಎನ್ನುವಂತಾಗಿತ್ತು. ಹೀಗಾಗಿ ಸರ್ಕಾರ, ಮುಕ್ತ ಮಾರುಕಟ್ಟೆ ಕಾಯಿದೆಗೆ ತಿದ್ದುಪಡಿ ತಂದು ಹಳೆಯ ನೀತಿ ಜಾರಿಗೆ ತಂದಿತು. ಪರಿಣಾಮ ಎಪಿಎಂಸಿ ಮಾರುಕಟ್ಟೆಗಳು ಸುಧಾರಣೆ ಕಾಣುತ್ತಿವೆ. ಹೀಗಾಗಿ ಎಪಿಎಂಸಿಗಳಿಗೆ ಹಣದ ಹರಿವು ಹೆಚ್ಚಳವಾಗುತ್ತಿದೆ.
ರೈತರು ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದೆಂಬ ಕಾನೂನನ್ನು 2020ರಲ್ಲಿ ಜಾರಿಗೊಳಿಸಲಾಯಿತು. ಆದರೆ, ಕೊರೊನಾ ಸಂದರ್ಭದಲ್ಲಿ ಎಪಿಎಂಸಿಗಳಲ್ಲಿ ವ್ಯವಹಾರ ಭಾರಿ ಪ್ರಮಾಣದಲ್ಲಿ
ಇಳಿಕೆಯಾಗಿತ್ತು. ಬಳಕೆದಾರರಿಗೆ ವಿಧಿಸಲಾಗುತ್ತಿದ್ದ ಮಾರುಕಟ್ಟೆ ಶುಲ್ಕ ಕೂಡ ಇಳಿಕೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಎಪಿಎಂಸಿಗಳಿಗೆ ನಷ್ಟ ಉಂಟಾಗುತ್ತಿತ್ತು.
ಸದ್ಯ ಹಳೆಯ ಪದ್ಧತಿ ಜಾರಿಯಾಗಿದ್ದರಿಂದಾಗಿ ಎಪಿಎಂಸಿಗಳು ಆರ್ಥಿಕವಾಗಿ ಸದೃಢವಾಗುತ್ತಿವೆ. ಹೀಗಾಗಿ ರೈತರಿಗೆ ಭರವಸೆ ಮೂಡುವಂತಾಗಿದೆ. ಪರವಾನಿಗೆದಾರರ ಸಂಖ್ಯೆ ಕೂಡ ಈಗ ಹೆಚ್ಚಳವಾಗುತ್ತಿದೆ. ಈಗ ರಾಜ್ಯದಲ್ಲಿ ಸುಮಾರು 18 ಸಾವಿರ ದಲ್ಲಾಳಿಗಳು, 27 ಸಾವಿರ ವರ್ತಕರು ಸೇರಿದಂತೆ ಸುಮಾರು 40 ಸಾವಿರ ಪರವಾನಗಿದಾರರಿದ್ದಾರೆ.