ನೇಪಿಡಾ: ಮ್ಯಾನ್ಮಾರ್ನ ಕೇಂದ್ರ ಭಾಗದಲ್ಲಿರುವ ಬೌದ್ಧ ಧರ್ಮದ ಪ್ರಾರ್ಥನಾ ಮಂದಿರದ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 23 ನಾಗರಿಕರು ಮೃತಪಟ್ಟಿದ್ದಾರೆ, ಇವರಲ್ಲಿ ನಾಲ್ಕು ಮಕ್ಕಳು ಸಹ ಸೇರಿದ್ದಾರೆ. ಈ ಆಘಾತಕಾರಿ ಘಟನೆಯು ದೇಶದ ಎರಡನೇ ಅತಿದೊಡ್ಡ ನಗರವಾದ ಮಾಂಡಲೇನಿಂದ ಸುಮಾರು 35 ಕಿಲೋಮೀಟರ್ ವಾಯವ್ಯದಲ್ಲಿರುವ ಸಾಗೈಂಗ್ ಟೌನ್ಶಿಪ್ನ ಲಿನ್ ತಾ ಲು ಗ್ರಾಮದಲ್ಲಿ ಸಂಭವಿಸಿದೆ. ಸಾಗೈಂಗ್ ಪ್ರದೇಶವು ಸೇನಾ ವಿರೋಧಿ ಪ್ರತಿರೋಧದ ಪ್ರಬಲ ಕೇಂದ್ರವಾಗಿದೆ.

ಆ ಪ್ರದೇಶದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳಿಂದ ತಪ್ಪಿಸಿಕೊಳ್ಳಲೆಂದು 150ಕ್ಕೂ ಹೆಚ್ಚು ಜನರು ಈ ಬುದ್ಧಿಸ್ಟ್ ಮಾನೆಸ್ಟ್ರಿಯಲ್ಲಿ ಆಶ್ರಯ ಪಡೆದಿದ್ದರು. ಅವರಿಗೆ ಆಶ್ರಯ ನೀಡಿದ್ದ ಮಂದಿರವನ್ನೇ ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ.
“ದಾಳಿಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ 23 ನಾಗರಿಕರು ಮೃತಪಟ್ಟಿದ್ದಾರೆ. ಸುಮಾರು 30 ಜನರು ಗಾಯಗೊಂಡಿದ್ದು, ಅವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ” ಎಂದು ಸ್ಥಳೀಯ ಪ್ರತಿರೋಧ ಗುಂಪಿನ ಹೆಸರು ಹೇಳಲು ಇಚ್ಛಿಸದ ಸದಸ್ಯರೊಬ್ಬರು ತಿಳಿಸಿದ್ದಾರೆ. ಸ್ವತಂತ್ರ ಸುದ್ದಿ ಮಾಧ್ಯಮವಾದ ಡೆಮಾಕ್ರಟಿಕ್ ವಾಯ್ಸ್ ಆಫ್ ಬರ್ಮಾ, ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 30 ಆಗಿರಬಹುದು ಎಂದು ವರದಿ ಮಾಡಿದೆ. ಮ್ಯಾನ್ಮಾರ್ ಸೇನೆ ಈ ದಾಳಿಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಹೆಚ್ಚುತ್ತಿರುವ ಸೇನಾ ಆಕ್ರಮಣ ಮತ್ತು ರಾಜಕೀಯ ಹಿನ್ನೆಲೆ
ಈ ಮಂದಿರದ ಮೇಲಿನ ದಾಳಿಯು ಸಾಗೈಂಗ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಆಕ್ರಮಣಕಾರಿ ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಘಟನೆಯಾಗಿದೆ. ಈ ಪ್ರದೇಶವು ಆಡಳಿತಾರೂಢ ಜಂಟಾ ವಿರೋಧಿ ಪ್ರತಿರೋಧದ ಪ್ರಮುಖ ಕೇಂದ್ರವಾಗಿದೆ. ಇತ್ತೀಚೆಗೆ, ಸೇನೆಯು ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಆಕ್ರಮಣ ಪ್ರಾರಂಭಿಸಿದೆ. ಟ್ಯಾಂಕ್ಗಳು ಮತ್ತು ವಿಮಾನಗಳನ್ನು ಬಳಸಿಕೊಂಡು ಸ್ಥಳೀಯ ವಿರೋಧಿ ಗುಂಪುಗಳಿಂದ ಭೂಪ್ರದೇಶವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.
ಸೇನಾ ವಿರೋಧಿ ರಾಷ್ಟ್ರೀಯ ಏಕತಾ ಸರ್ಕಾರದ ವಕ್ತಾರ ನೇ ಫೋನ್ ಲಾಟ್ ಅವರು ಮಾತನಾಡಿ, “ಈ ವರ್ಷದ ಅಂತ್ಯದ ವೇಳೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಆಡಳಿತವು ಬಯಸುತ್ತಿದೆ. ಇದು ಅವರನ್ನು ಅಧಿಕಾರದಲ್ಲಿ ಮುಂದುವರಿಯಲು ಸಹಾಯ ಮಾಡಬಹುದು” ಎಂದಿದ್ದಾರೆ.
2021ರ ಫೆಬ್ರವರಿಯಲ್ಲಿ ಆಂಗ್ ಸಾನ್ ಸೂ ಕೀ ಅವರ ಚುನಾಯಿತ ಸರ್ಕಾರವನ್ನು ಉರುಳಿಸಿದ ರಾಜಕೀಯ ದಂಗೆಯ ನಂತರ ಮ್ಯಾನ್ಮಾರ್ನಲ್ಲಿ ವ್ಯಾಪಕ ಜನಾಂದೋಲನ ಮತ್ತು ಕ್ರೂರ ಸೇನಾ ದಮನ ಆರಂಭವಾಯಿತು. ಅಂದಿನಿಂದ, ದೇಶಾದ್ಯಂತ, ವಿಶೇಷವಾಗಿ ಸಾಗೈಂಗ್ನಲ್ಲಿ ಶಸ್ತ್ರಸಜ್ಜಿತ ಪ್ರತಿರೋಧವು ಗಣನೀಯವಾಗಿ ಏರಿಕೆಯಾಗಿದ್ದು. ನಾಗರಿಕರು ಮತ್ತು ಸಮುದಾಯದ ಶಸ್ತ್ರಸಜ್ಜಿತ ಗುಂಪುಗಳು ಸೇನಾ ನಿಯಂತ್ರಣವನ್ನು ವಿರೋಧಿಸುವಲ್ಲಿ ಸಕ್ರಿಯವಾಗಿವೆ.



















