ಬೆಂಗಳೂರು: ನನ್ನ ಅಪ್ಪ ಕೂಡ ರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ನೀಡಿದ್ದಾರೆ. ಆದರೆ, ಅದೂ ಸೋರುತ್ತಿದೆಯಲ್ಲ? ಅದರ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಅಯೋಧ್ಯೆಯಲ್ಲಿ 3,500 ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣ ಮಾಡಿದ್ದಾರೆ. ಮಂದಿರ ನಿರ್ಮಾಣಕ್ಕೆ ನಮ್ಮಪ್ಪನು ಇಟ್ಟಿಗೆ ಕೊಟ್ಟಿದ್ದಾನೆ. ಅದು ಸೋರುತ್ತಿದ್ದರೂ ಮೌನವಗಿಸಿದ್ದೇಕೆ ಎಂದು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಅತ್ಯಾಚಾರ ನಡೆಯುತಿವೆ. ಅದರ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ. ಹಿಂದೂಗಳ ಮಕ್ಕಳ ಸಮಸ್ಯೆಯ ಕುರಿತು ಮಾತನಾಡುತ್ತಿಲ್ಲ. ನಾಗಮಂಗಲ ಗಲಭೆ ಕೆಟ್ಟ ಘಟನೆ. ಇಂತಹ ಘಟನೆ ದೇಶದಲ್ಲೇ ನಡೆಯಬಾರದು. ಯಾರು ಮಾಡಿದ್ದಾರೆ ಅವರನ್ನು ಹುಡುಕಬೇಕು. ಆರೋಪಿಗಳನ್ನು ಹಿಡಿದು ಶಿಕ್ಷೆ ಕೊಡಬೇಕು ಅಷ್ಟೇ. ಬಿಜೆಪಿ ನಾಯಕರಿಗೆ ಇದು ಬಿಟ್ಟು ಬೇರೆ ಏನಿದೆ? ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಹಗರಣ ತನಿಖೆ ಮಾಡಲು 10 ವರ್ಷಗಳು ಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ ಸಮಿತಿ ರಚಿಸಿದ್ದೇವೆ. ಅವರು ವರದಿ ಕೊಡುವುದು ತಡ ಆಗಿರಬಹುದು. ಆದರೆ ನಾವು ಯಾವುದನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.