ಮೀರತ್: ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ತನ್ನ ಪತಿ ಸೌರಭ್ ರಜಪೂತ್ ಅವರನ್ನು ಪ್ರಿಯಕರನ ಜತೆ ಸೇರಿ ಕೊಲೆಗೈದು, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಟ್ಯಾಂಕ್ ಗೆ ಸುರಿದು ಅದರ ಮೇಲೆ ಹಸಿ ಸಿಮೆಂಟ್ ಸುರಿದಿದ್ದ ಭೀಕರ ಕೊಲೆ ಪ್ರಕರಣ ನಿಮಗೆಲ್ಲ ನೆನಪಿರಬಹುದು. ಮೀರತ್ ನಲ್ಲಿ ನಡೆದಿದ್ದ ಈ ಕೊಲೆಯು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಹೊಸ ವಿಷಯ ಏನೆಂದರೆ, ಸೌರಭ್ರನ್ನು ಕೊಂದ ಪ್ರಕರಣದಲ್ಲಿ ಜೈಲು ಸೇರಿರುವ ಪತ್ನಿ 28 ವರ್ಷದ ಮುಸ್ಕಾನ್ ರಸ್ತೋಗಿ, ತನ್ನ ಕೇಸನ್ನು ಸ್ವತಃ ವಾದಿಸಲು ಕಾನೂನು ಶಿಕ್ಷಣವನ್ನು ಜೈಲಿನಿಂದಲೇ ಪಡೆಯಲು ಅನುಮತಿ ಕೋರಿದ್ದಾಳಂತೆ!
ಈ ವಿಷಯವನ್ನು ಸ್ವತಃ ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ವಕೀಲರಿಂದ ಸಿಗುತ್ತಿರುವ ಬೆಂಬಲದಿಂದ ತೃಪ್ತಳಾಗದ ಮುಸ್ಕಾನ್, ತನ್ನ ಕೇಸನ್ನು ತಾನೇ ವಾದಿಸಲು ಉದ್ದೇಶಿಸಿದ್ದು, ಅದಕ್ಕಾಗಿ ಕಾನೂನು ಓದಲು ರೆಡಿಯಾಗಿದ್ದಾಳೆ ಎಂದು ಜೈಲಧಿಕಾರಿ ತಿಳಿಸಿದ್ದಾರೆ.
ಮುಸ್ಕಾನ್ ಕಾನೂನು ಪದವಿ ಅಷ್ಟು ಸುಲಭವಿಲ್ಲ
ಮುಸ್ಕಾನ್ 8ನೇ ತರಗತಿಗಿಂತ ಮೇಲೆ ಓದಿಲ್ಲ. ಕಾನೂನು ಶಿಕ್ಷಣ (LLB) ಪಡೆಯಲು ಅಗತ್ಯವಾದ ಮಾಧ್ಯಮಿಕ (ಸೀನಿಯರ್ ಸೆಕೆಂಡರಿ) ಪ್ರಮಾಣಪತ್ರವನ್ನೂ ಹೊಂದಿಲ್ಲ. ಹೀಗಾಗಿ ಕಾನೂನು ಶಿಕ್ಷಣವನ್ನು ಪಡೆಯಬೇಕೆಂದರೆ ಅವಳು ಮೊದಲು ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಬೇಕು. ಜೈಲು ಅಧಿಕಾರಿಗಳು ಈಗ ಇದಕ್ಕೆ ಅಗತ್ಯ ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ. ಜೈಲಿನೊಳಗೆ ಓದಲು ಬಯಸುವವರಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ವಿವಿಧ ಶೈಕ್ಷಣಿಕ ಕೋರ್ಸ್ ಗಳನ್ನು ಒದಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮುಸ್ಕಾನ್ ಜೈಲಿಗೆ ಬಂದಾಗಿನಿಂದ ಅವಳ ಕುಟುಂಬದ ಯಾರೂ ಆಕೆಯನ್ನು ಭೇಟಿಯಾಗಿಲ್ಲ, ಆದರೆ ಸಾಹಿಲ್ನ ತಾಯಿಯ ತಾಯಿ ಮತ್ತು ಸಹೋದರ ಭೇಟಿಯಾಗಿದ್ದಾರೆ. ಈಗ ಮುಸ್ಕಾನ್ ಕಾನೂನು ಶಿಕ್ಷಣವನ್ನು ಪಡೆಯಲು ಆಸಕ್ತಿ ತೋರಿದ್ದಾಳೆ. ನಾವು ಇದರ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಅವಳು ಓದಲು ಬಯಸಿದರೆ, ಜೈಲು ಅಧಿಕಾರಿಗಳು ಅಗತ್ಯವಾದ ಎಲ್ಲ ಸಂಪನ್ಮೂಲಗಳನ್ನು ಒದಗಿಸುತ್ತಾರೆ” ಎಂದು ಜಿಲ್ಲಾ ಜೈಲಿನ ಹಿರಿಯ ಸೂಪರಿಂಟೆಂಡೆಂಟ್ ವಿರೇಶ್ ರಾಜ್ ಶರ್ಮಾ ತಿಳಿಸಿದ್ದಾರೆ.
ಏನಿದು ಮೀರತ್ ಮರ್ಡರ್?
ಮುಸ್ಕಾನ್ ರಸ್ತೋಗಿ ಮತ್ತು ಅವಳ ಪ್ರಿಯಕರ ಸಾಹಿಲ್ ಶುಕ್ಲಾ ಒಟ್ಟಿಗೆ ಸೇರಿ, ಮುಸ್ಕಾನ್ನ 35 ವರ್ಷದ ಪತಿ ಸೌರಭ್ ರಜ್ಪೂತ್ನನ್ನು ಚಾಕುವಿನಿಂದ ಇರಿದು ಕೊಂದು, ಅವನ ಶವವನ್ನು ತುಂಡು ತುಂಡಾಗಿ ಕತ್ತರಿಸಿ, ಮೀರತ್ನ ಬ್ರಹ್ಮಪುರಿಯ ನಿವಾಸದಲ್ಲಿ ನೀಲಿ ಡ್ರಮ್ನಲ್ಲಿ ಸಿಮೆಂಟ್ನೊಂದಿಗೆ ಮುಚ್ಚಿದ್ದರು. ಈ ಭಯಾನಕ ಘಟನೆ ಮಾರ್ಚ್ 18, 2025ರಂದು ಬೆಳಕಿಗೆ ಬಂದಿತ್ತು. ಕೊಲೆಯ ನಂತರ ಈ ಜೋಡಿ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿತ್ತು. ಇಬ್ಬರೂ ಶಿಮ್ಲಾ, ಮನಾಲಿ ಮತ್ತು ಕಸೋಲ್ನಲ್ಲಿ ಕಾಣಿಸಿಕೊಂಡಿದ್ದರು. ಮಾರ್ಚ್ 11 ರಂದು, ಕೊಲೆಯ ಕೆಲವೇ ದಿನಗಳ ನಂತರ, ಮುಸ್ಕಾನ್ ಮನಾಲಿಯಲ್ಲಿ ಸಾಹಿಲ್ನ ಜನ್ಮದಿನವನ್ನೂ ಆಚರಿಸಿದ್ದಳು. ಅಲ್ಲಿಂದ ವಾಪಸಾದ ಬಳಿಕ ಈ ಕೊಲೆ ಪ್ರಕರಣ ಬಯಲಾಗಿ, ಇಬ್ಬರೂ ಈಗ ಕಂಬಿ ಎಣಿಸುತ್ತಿದ್ದಾರೆ.
ಮುಸ್ಕಾನ್ ಈಗ ಗರ್ಭಿಣಿ
ಜೈಲಿನ ನಿತ್ಯದ ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಮುಸ್ಕಾನ್ 4-6 ವಾರಗಳ ಗರ್ಭಿಣಿಯಾಗಿರುವುದು ಇತ್ತೀಚೆಗೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಆಕೆಗೆ ವಿಶೇಷ ಕಾಳಜಿ, ಆಹಾರ, ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಸೌರಭ್ನ ಕುಟುಂಬವು ಮಗುವಿನ ಜೈವಿಕ ಸಂಬಂಧವನ್ನು ಆಧರಿಸಿ ಅದನ್ನು ದತ್ತು ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.-