ಬೆಂಗಳೂರು: ಹಿಂದಿನ ವರ್ಷ ತೆರೆ ಕಂಡಿದ್ದ ಆದಿತ್ಯ ಅಭಿನಯದ “ಕಾಂಗರೂ” ಚಿತ್ರತಂಡದಿಂದ ಹೊಸ ಚಿತ್ರದ ಘೋಷಣೆಯಾಗಿದೆ. “ಕೆ.ಜಿ.ಎಫ್” ಚಿತ್ರಕ್ಕೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ನೂತನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
“ಕಾಂಗರೂ” ಚಿತ್ರವನ್ನು ನಿರ್ಮಿಸಿದ್ದ ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ಸ್ವಾಮಿ ಚಕ್ರಭಾವಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ರವಿ ಕೀಲಾರ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ಅವರು ಇದೇ ಬ್ಯಾನರ್ ಅಡಿಯಲ್ಲಿ ಎರಡನೇ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.
“ಕಾಂಗರೂ” ಚಿತ್ರದ ನಿರ್ದೇಶಕ ಕಿಶೋರ್ ಮೇಗಳಮನೆ ಈ ನೂತನ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ತಿ ಸಂಭಾಷಣೆ ಮತ್ತು ಚಿತ್ರಕಥೆ ಬರೆಯುತ್ತಿದ್ದಾರೆ. “ಕಾಂಗರೂ” ತಂಡದ ಎರಡನೇ ಪ್ರಯತ್ನಕ್ಕೆ ಪ್ರೋತ್ಸಾಹವಿರಲಿ. ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಲು ಒಪ್ಪಿಕೊಂಡಿರುವುದು ಹಾಗೂ ಮಾಸ್ತಿ ಅವರು ಸಂಭಾಷಣೆಯ ಜೊತೆಗೆ ಚಿತ್ರಕಥೆಗೆ ಸಾಥ್ ನೀಡುತ್ತಿರುವುದು ತುಂಬಾ ಖುಷಿಯ ವಿಚಾರ. ಸದ್ಯದಲ್ಲೇ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಲಾಗುವುದು. ಅದೇ ಸಮಯದಲ್ಲಿ ಚಿತ್ರದ ನಾಯಕ ಹಾಗೂ ನಾಯಕಿಯ ಯಾರೆಂದು ತಿಳಿಸಲಾಗುವುದು ಎಂದು ನಿರ್ದೇಶಕ ಕಿಶೋರ್ ಮೇಗಳಮನೆ ಹೇಳಿದ್ದಾರೆ.