ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಆಂಡ್ ಗ್ಯಾಂಗ್ ನ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ವಿಸ್ತರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆಂಡ್ ಗ್ಯಾಂಗ್ ಅರೆಸ್ಟ್ ಆಗಿ ಮೂರು ತಿಂಗಳು ಕಳೆದಿವೆ. ಸೆ. 17ಕ್ಕೆ ಅವರ ಬಂಧನ ಅವಧಿ ಪೂರ್ಣಗೊಳ್ಳುವುದರಲ್ಲಿತ್ತು. ಹೀಗಾಗಿ, ದರ್ಶನ್ ಹಾಗೂ ಗ್ಯಾಂಗ್ ನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಜೈಲುಗಳಿಂದಲೇ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ ಕೋರ್ಟ್, ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿದೆ.
ಈ ಸಂದರ್ಭದಲ್ಲಿ ಕುರ್ಚಿ ಕುರಿತು ಮತ್ತೊಮ್ಮೆ ಜಡ್ಜ್ ಎದುರು ದರ್ಶನ್ ಪರ ವಕೀಲರು ಮನವಿ ಮಾಡಿದರು. ‘ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡಲು ಜೈಲಾಧಿಕಾರಿಗಳು ಆಗಲ್ಲ ಎನ್ನುತ್ತಿದ್ದಾರೆ. ಆದರೆ, ಬೇರೆ ಕೈದಿಗಳಿಗೆ ಆ ವ್ಯವಸ್ಥೆ ಇದೆ. ಆದರೆ, ದರ್ಶನ್ ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದರು.
‘ಕೈದಿಗಳಿಗೆ ಏನು ವ್ಯವಸ್ಥೆ ನೀಡಬೇಕು ಎಂದು ಜೈಲಿನ ನಿಯಮ ಪಟ್ಟಿಯಲ್ಲಿ ಇದೆ. ಅದು ಕೊಡಬೇಕು ಎಂದು ಆದೇಶ ಮಾಡುತ್ತೇನೆ’ ಎಂದು ಜಡ್ಜ್ ಹೇಳಿದರು. ಬಳ್ಳಾರಿ ಸೆಂಟ್ರಲ್ ಜೈಲಿನಿಂದ ದರ್ಶನ್, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಪವಿತ್ರಾಗೌಡ ಹಾಜರಾಗಿದ್ದರು. ಇನ್ನುಳಿದಂತೆ ತುಮಕೂರು, ಮೈಸೂರು, ಧಾರವಾಡ, ಕಲಬುರಗಿ, ವಿಜಯಪುರ, ಹಿಂಡಲಗಾ ಜೈಲಿನಿಂದ ಆರೋಪಿಗಳು ಹಾಜರಾಗಿದ್ದರು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿತು.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸದ್ಯದಲ್ಲಿಯೇ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.