ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಕಂಕನಾಡಿ ಬೊಲ್ಲಗುಡ್ಡದ ರೋಷನ್ ಸಲ್ದಾನ, 50 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಿದ್ದಕ್ಕೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಲ್ದಾನ 10 ಕೋಟಿ ರೂಪಾಯಿ ವಂಚಿಸಿರುವುದಾಗಿ ಒಬ್ಬರು ಹಾಗೂ ಆತನಿಂದ
1 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಇನ್ನೊಬ್ಬರು ದೂರು ನೀಡಿದ್ದರು. ಈ ದೂರುಗಳ ಆಧಾರದಲ್ಲಿ, ಸೆನ್ ಠಾಣೆಯ ಎಸಿಪಿ ರವೀಶ್ ನಾಯಕ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡವು ನಗರದ ಕಂಕನಾಡಿಯ ಬೊಲ್ಲಗುಡ್ಡದಲ್ಲಿರುವ ಮನೆಯಲ್ಲಿ ಆತನನ್ನು ಗುರುವಾರ ಬಂಧಿಸಿತ್ತು. ಮನೆಯ ಕಟ್ಟಡದಲ್ಲೇ ಆತನ ಅಡಗುತಾಣವೂ ಪತ್ತೆಯಾಗಿದ್ದು, ಆರೋಪಿ ಸಂಗ್ರಹಿಸಿಟ್ಟಿದ್ದ 667 ಗ್ರಾಂ ಚಿನ್ನಾಭರಣಗಳು, 2.75 ಕೋಟಿ ರೂಪಾಯಿಗೂ ಮೌಲ್ಯದ ವಜ್ರದುಂಗುರಗಳು, ದೇಶಿ ಮತ್ತು ವಿದೇಶಿ ಮದ್ಯವನ್ನು (6.72 ಲಕ್ಷ ಮೌಲ್ಯ) ಪೊಲೀಸರು ವಶಪಡಿಸಿಕೊಂಡಿದ್ದರು.
ವಿವಿಧ ರಾಜ್ಯಗಳ ಉದ್ಯಮಿಗಳಿಗೆ ಸಾಲ ನೀಡುವುದಾಗಿ ನಂಬಿಸಿ ಆರೋಪಿ ಮತ್ತು ಆತನ ಸಹಚರರು 32 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮೂರು ತಿಂಗಳಿನಿಂದ ಈಚೆಗೆ ಪಡೆದಿದ್ದಕ್ಕೆ ಸಂಬಂಧಿಸಿದ ದಾಖಲೆಗಳು ಈ ವೇಳೆ ಪತ್ತೆಯಾಗಿದ್ದು, ಅವುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು.
‘ಆರೋಪಿ ವಹಿವಾಟು ನಡೆಸಿದ್ದ ಇನ್ನಷ್ಟು ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ. ಆತ ಅವುಗಳ ಮೂಲಕ 50 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಹಿವಾಟು ನಡೆಸಿದ ಮಾಹಿತಿ ಲಭ್ಯವಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಿಹಾರದ ವ್ಯಕ್ತಿಗೆ ಆರೋಪಿಯು 10 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆಸಿದ ಕುರಿತು ದಾಖಲಾದ ದೂರನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು



















