ಉಡುಪಿ: ಶಿರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮುಹೂರ್ತಗಳಲ್ಲಿ ಮೂರನೆಯದಾದ ಕಟ್ಟಿಗೆ ಮುಹೂರ್ತ ಶ್ರೀಕೃಷ್ಣ ಮಠದಲ್ಲಿ ಪರಿಸರದಲ್ಲಿ ನಡೆಯಿತು.
ದಿವಾನ ಉದಯಕುಮಾರ ಸರಳತ್ತಾಯ ನೇತೃತ್ವದಲ್ಲಿ ಪುರೋಹಿತ ಗಿರಿರಾಜ ಉಪಾಧ್ಯಾಯ ಅವರು ವಿಠಲ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ರಥಬೀದಿಯಲ್ಲಿ ಚಂದ್ರೇಶ್ವರ, ಅನಂತೇಶ್ವರ, ಕೃಷ್ಣಮಠದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರಿಗೂ ಪ್ರಾರ್ಥನೆ ಸಲ್ಲಿಸಲಾಯಿತು.
ಕಲ್ಸಂಕದ ಬಳಿಯ ಲಕ್ಷ್ಮಿ ತೋಟದಿಂದ ಕಟ್ಟಿಗೆಗಳನ್ನು ಮೂರು ಎತ್ತಿನ ಗಾಡಿಗಳಲ್ಲಿ ಮತ್ತು ಭಕ್ತರು ತಲೆಹೊರೆಯಲ್ಲಿ ರಥಬೀದಿಗೆ ತಂದರು. ಮಧ್ವಸರೋವರದ ಈಶಾನ್ಯ ಭಾಗದ ನಿಗದಿತ ಸ್ಥಳದಲ್ಲಿ ನವಧಾನ್ಯ ದಾನ, ಪೂಜೆ ಸಲ್ಲಿಸಲಾಯಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ವೇದವರ್ಧನತೀರ್ಥ ಶ್ರೀಪಾದರು ಜೊತೆಯಾಗಿ ಕಟ್ಟಿಗೆ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.



















