ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ 23 ಜನರಿಂದ ಆರು ದಿನಗಳ ಕಾಲ ನಡೆದ ಭೀಕರ ಸಾಮೂಹಿಕ ಅತ್ಯಾಚಾರ(Varanasi Gang Rape Case) ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಶುಕ್ರವಾರ ಬೆಳಗ್ಗೆ ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಆಗಮಿಸಿದ ಪ್ರಧಾನಿ ಮೋದಿ, ತಮ್ಮದೇ ಕ್ಷೇತ್ರದಲ್ಲಿ ನಡೆದ ಈ ಘೋರ ಘಟನೆಯ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದರು.
ಏನಿದು ಪ್ರಕರಣ?
ಇದೇ ವರ್ಷದ ಮಾರ್ಚ್ 29 ರಿಂದ ಏಪ್ರಿಲ್ 4ರವರೆಗೆ ಈ ಆಘಾತಕಾರಿ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಾರಾಣಸಿಯ ಲಾಲ್ಪುರ್ ಪ್ರದೇಶದ ನಿವಾಸಿಯಾಗಿರುವ 19 ವರ್ಷದ ಯುವತಿಯೊಬ್ಬಳು ತನ್ನ ಸ್ನೇಹಿತನನ್ನು ಭೇಟಿಯಾಗಲು ಮನೆಯಿಂದ ಹೊರಟಿದ್ದಳು. ಆದರೆ, ಅಂದಿನಿಂದ ಆಕೆ ಮನೆಗೆ ಮರಳಲಿಲ್ಲ. ಏಪ್ರಿಲ್ 4ರಂದು ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತನ್ನ ಮೇಲೆ 6 ದಿನಗಳ ಕಾಲ 23 ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ಮನೆಯವರ ಮುಂದೆ ಬಾಯಿಬಿಟ್ಟಿದ್ದಳು. ಏ.6ರಂದು ಆಕೆಯ ತಾಯಿ ಲಾಲ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಯುವತಿಯ ತಾಯಿಯ ದೂರಿನ ಆಧಾರದ ಮೇಲೆ, 12 ಮಂದಿ ಪರಿಚಿತರು ಮತ್ತು 11 ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 70(1) (ಸಾಮೂಹಿಕ ಅತ್ಯಾಚಾರ), 74 (ಮಹಿಳೆಯ ಮಾನಹಾನಿಗೆ ಒಡ್ಡುವ ದೌರ್ಜನ್ಯ), 123 (ವಿಷವನ್ನು ಉಪಯೋಗಿಸಿ ಅಪರಾಧ ಮಾಡುವ ಉದ್ದೇಶ), 127(2) (ಅಕ್ರಮ ಬಂಧನ), ಮತ್ತು 351(2) (ಕ್ರಿಮಿನಲ್ ಭೀತಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.
ಪೊಲೀಸ್ ಕಾರ್ಯಾಚರಣೆ
ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಾರಾಣಸಿಯ ಡಿಎಸ್ಪಿ ಚಂದ್ರಕಾಂತ್ ಮೀನಾ ಅವರು, ಸಂತ್ರಸ್ತೆಯ ತಾಯಿಯ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವ ಭರವಸೆ ನೀಡಿದ್ದಾರೆ.
ಪ್ರಧಾನಿಯ ಸೂಚನೆ
ಶುಕ್ರವಾರ ವಾರಾಣಸಿಗೆ ಆಗಮಿಸಿದ ತಕ್ಷಣವೇ ಪ್ರಧಾನಿ ಮೋದಿ ಅವರು ಪೊಲೀಸ್ ಆಯುಕ್ತ, ವಿಭಾಗೀಯ ಆಯುಕ್ತ ಮತ್ತು ಜಿಲ್ಲಾಧಿಕಾರಿಗಳಿಂದ ಈ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಹೇಳಿಕೆಯ ಪ್ರಕಾರ, ಪ್ರಧಾನಿಯವರು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆಯೂ ಆದೇಶಿಸಿದ್ದಾರೆ.
ಈ ಘೋರ ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮಹಿಳೆಯರ ಸುರಕ್ಷತೆಯು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಆರೋಪಿಗಳನ್ನು ಕಾನೂನಿನ ಕಟಕಟೆಗೆ ತರುವ ಭರವಸೆ ನೀಡಿದ್ದಾರೆ.