ಬೆಂಗಳೂರು: ವಿಧಾನಸೌಧದಲ್ಲಿ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹೆಚ್.ಡಿ.ರೇವಣ್ಣ ಮೇಲಿನ ದೂರು ಪ್ರಕರಣ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಭಾವೋದ್ವೇಗಕ್ಕೊಳಗಾದರು.
ಆರ್.ಅಶೋಕ್ ಅವರು, ಹಾಸನ ಪ್ರಕರಣಗಳಲ್ಲಿ ಎಸ್ ಐಟಿ ನಡೆ ರೇವಣ್ಣ, ಭವಾನಿ ಹಾಗೂ ಪ್ರೀತಂ ಗೌಡ ವಿಚಾರದಲ್ಲಿ ಸರಿಯಿರಲಿಲ್ಲ. ರೇವಣ್ಣಗೆ ಬೇಲ್ ಪಡೆಯಲು ಅವಕಾಶ ಕೊಡದೆ ಅರೆಸ್ಟ್ ಮಾಡಿದ್ದು ತಪ್ಪು. ಎಸ್ ಐಟಿ ಭಯದಿಂದ ಇನ್ನಿಬ್ಬರು ಬೇಲ್ ತಗೋಬೇಕಾಯ್ತು. ಆದರೆ ನಾಗೇಂದ್ರರನ್ನು ಎಸ್ಐಟಿ ಬಂಧಿಸಲಿಲ್ಲ. ವಾಲ್ಮೀಕಿ ಪ್ರಕರಣದಲ್ಲಿ ಎಸ್ಐಟಿ ವಿಫಲ ಆಗಿದೆ. ನಾಗೇಂದ್ರ ಎಸ್ಐಟಿ ವಿಚಾರಣೆ ಎದುರಿಸಿ ನಗ್ತಾ ಬಂದ್ರು. ಎಸ್ಐಟಿಯಲ್ಲಿ ನಾಗೇಂದ್ರಗೆ ಒಂದು ಕಾನೂನು, ರೇವಣ್ಣಗೆ ಒಂದು ಕಾನೂನು ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಹೆಚ್.ಡಿ.ರೇವಣ್ಣ ಮಧ್ಯಪ್ರವೇಶ ಮಾಡಿ, ನನ್ನ ಹೆಸರು ಹೇಳಿದ್ದಾರೆ. ನನಗೆ ಮಾತಾಡಲು ಅವಕಾಶ ಬೇಕು. ನಾವು ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ, ಬೇಡ ಅನ್ನಲ್ಲ. ನಲವತ್ತು ವರ್ಷ ರಾಜಕೀಯ ಜೀವನದಲ್ಲಿದ್ದೀನಿ. ಯಾರೋ ಹೆಣ್ಮಗಳನ್ನ ಕರೆತಂದು ಡಿಜಿ ಕಚೇರಿಯಲ್ಲಿ ದೂರು ಕೊಡಿಸ್ತಾರೆ. ಡಿಜಿ ಆದವನು ದೂರು ಬರೆದುಕೊಳ್ತಾನೆ ಅಂದ್ರೆ ಆತ ಡಿಜಿ ಆಗಲು ಅನ್ಫಿಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.