ಬೆಂಗಳೂರು: ಶಾಸಕ ಅಶ್ವಥ್ ನಾರಾಯಣ್ ಅವರು ವಿಭಿನ್ನ ಕಥಾಹಂದರ ಹೊಂದಿರುವ “ನಾಗವಲ್ಲಿ ಬಂಗಲೆ” ಚಿತ್ರದ ಹಾಡುಗಳಿಗೆ ಚಾಲನೆ ನೀಡಿದರು. ಈ ವೇಳೆ ನಿರ್ಮಾಪಕ ಎಸ್.ಎ. ಚೆನ್ನೇಗೌಡ ಸೇರಿದಂತೆ ಹಲವರು ಇದ್ದರು.
ಈ ವೇಳೆ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ನಾನು ಸಿನಿಮಾ ನೋಡಿಕೊಂಡು ಬೆಳೆದವನು. ನಾವು ಕಂಡ ಕನಸನ್ನು ಸಿನಿಮಾದಲ್ಲಿ ನೋಡುತ್ತೇವೆ. ಸಿನಿಮಾದಲ್ಲಿ ನೋಡಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂತಹ ಶಕ್ತಿ ಸಿನಿಮಾಗೆ ಮಾತ್ರ ಇರುವುದು. ಆತ್ಮೀಯರಾದ ನೆ.ಲ.ನರೇಂದ್ರ ಬಾಬು ಅವರ ಸಹೋದರ ನೆ.ಲ.ಮಹೇಶ್ ಮತ್ತು ತಮ್ಮ ಸ್ನೇಹಿತರಾದ ನೇವಿ ಮಂಜು ರವರು ನಿರ್ಮಾಣ ಮಾಡಿರುವ “ನಾಗವಲ್ಲಿ ಬಂಗಲೆ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿರುವುದು ಖುಷಿ ತಂದಿದೆ. ನನ್ನ ಸಹೋದರ ನೆ.ಲ. ಮಹೇಶ್ ಹಂಸ ಕ್ರಿಯೇಷನ್ಸ್ ಲಾಂಛನದಲ್ಲಿ ನೇವಿ ಮಂಜು ಅವರೊಂದಿಗೆ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾನು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎಂದರು ನೆ.ಲ.ನರೇಂದ್ರ ಬಾಬು ಹೇಳಿದರು.
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ಈ ಕಥೆಯಲ್ಲಿದೆ. ಇದಲ್ಲದೆ ಅರಿಷಡ್ವರ್ಗಗಳನ್ನು ಜಯಿಸಿದ ಮನುಷ್ಯ ಹೇಗಿರುತ್ತಾನೆ ಎಂದು ತಿಳಿಸುವ ಏಳನೇ ಪಾತ್ರ ಕೂಡ ಇದೆ. ನಾನು ಸಾಕಷ್ಟು ಚಿತ್ರಗಳಿಗೆ ಕಥೆ ಬರೆದಿದ್ದೇನೆ. ಇದು ನಾನು ಕಥೆ ಬರೆದಿರುವ 35 ನೇ ಚಿತ್ರ ಎಂದು ಕಥಾ ಲೇಖಕ ಜೆ.ಎಂ.ಪ್ರಹ್ಲಾದ್ ಹೇಳಿದರು.
ನಿರ್ದೇಶಕರು ಕವಿ ರಾಜೇಶ್, ಚಿತ್ರದ ಕಲಾವಿದರಾದ ರೂಪ, ಯಶ್ ಸೇರಿದಂತೆ ಹಲವರಿದ್ದರು.