ದಾವಣಗೆರೆ: ನಮ್ಮ ತಂದೆ ಬಹಳ ಕಷ್ಟದಿಂದ ಬೆಳೆದವರು ನನಗೆ ಆ ಕಷ್ಟ ಇಲ್ಲ. ಅಗಲಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಅವರ ಪುತ್ರ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಭಾವುಕರಾದರು.

ದಾವಣಗೆರೆಯ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ್, ಕಳೆದ 15 ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆ ಅನುಭವುಸುತ್ತಿದ್ದರು. ಇದು ವಯೋ ಸಹಜ ಕಾಯಿಲೆ ಹೀಗಾಗಿ ಅವರು ನಮ್ಮನ್ನಗಲಿದ್ದಾರೆ. ತಮ್ಮ ತಂದೆ ಕಷ್ಟದಲ್ಲಿಯೇ ಹುಟ್ಟಿ, ಕಷ್ಟ ಅನುಭವಿಸಿಯೇ ಬೆಳೆದರು. ಅವರಲ್ಲಿ ಇರುವ ಸಾಮಾನ್ಯಜ್ಞಾನ ಮಾತ್ರ ಮೆಚ್ಚುವಂತಹದ್ದು. ಮೊದಲು ಉದ್ಯಮ ಹಾಗೂ ನಂತರ ರಾಜಕೀಯದಲ್ಲಿ ಬೆಳೆದರು. ನಮ್ಮ ತಾತ ಕೂಡಾ ಡಿ.16ಕ್ಕೆ ನಿಧನರಾಗಿದ್ದರು ತಂದೆ 14ಕ್ಕೆ ನಿಧನರಾಗಿದ್ದಾರೆ ಎಂದು ಭಾವುಕರಾದರು.
ಜಿಲ್ಲೆಯ ಅಭಿವೃದ್ಧಿಗೆ ಅವರ ಪಾತ್ರ ಮಹತ್ವದ್ದಾಗಿದೆ. ಸಾರ್ವಜನಿಕರು ಸಹಕರಿಸಬೇಕು, ಎಲ್ಲರಿಗೂ ದರ್ಶನದ ಅವಕಾಶವಿದೆ. ಕಲ್ಲೇಶ್ವರ ರೈಸ್ ಮಿಲ್ ಬಳಿ ನಮ್ಮ ತಾಯಿ ಸಮಾಧಿ ಬಳಿ ತಂದೆ ಅಂತ್ಯಕ್ರಿಯೆ ನಡೆಯಲಿದೆ. ವೀರಶೈವ ಲಿಂಗಾಯತ ಸಮಾಜದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅವರಗೊಳ್ಳ ಓಂಕಾರ ಶಿವಚಾರ್ಯ ಸ್ವಾಮೀಜಿ, ಕಣ್ವಕುಪ್ಪೇ ಶ್ರೀ ಗಳ ಸಮ್ಮುಖದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರಕ್ಕೆ ಹಿರಿಯ ಮಗ ಬಕ್ಕೇಶ್ ಹಾಗೂ ಕಿರಿಯ ಮಗ ಎಸ್.ಎಸ್ ಮಲ್ಲಿಕಾರ್ಜುನ್ ವಿಧಿವಿಧಾನ ಪೂರೈಸಿದ್ದಾರೆ. ಮಲ್ಲಿಕಾರ್ಜುನ್ ಪತ್ನಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಪುತ್ರಿ ಶ್ರೇಷ್ಟಾ ಶಾಮನೂರು, ಸಮರ್ಥ್ ಶಾಮನೂರು, ಶಿವು ಶಾಮನೂರು ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು.
ಇದನ್ನೂ ಓದಿ; ವೀರಶೈವ ಸಂಪ್ರಾದಯಂತೆ ಇಂದು ಸಂಜೆ ಶಿವಶಂಕರಪ್ಪ ಅವರಿಗೆ ಅಂತಿಮ ನಮನ | ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ



















