ನವದೆಹಲಿ : ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರತದ “ಪ್ರಬುದ್ಧ ನಾಗರಿಕರು” ತಕ್ಕ ಪಾಠ ಕಲಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಆಂಗ್ಲ ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಮೋದಿ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ‘ವೋಟ್ ಚೋರಿ’ (ಮತಗಳ ಕಳ್ಳತನ) ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಜನರ ವಿಶ್ವಾಸ ಕಳೆದುಕೊಂಡಿರುವುದೇ ಕಾಂಗ್ರೆಸ್ನ ಇಂದಿನ ದುಸ್ಥಿತಿಗೆ ಕಾರಣ ಎಂದು ಗುಡುಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಭಾರತೀಯರು ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೋಧಿಸುತ್ತಲೇ ಬಂದಿದ್ದಾರೆ ಎಂದು ಹೇಳಿದ್ದಾರೆ.
1984ರ ಚುನಾವಣೆಯ ಅಂಕಿಅಂಶಗಳನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ, “ಅಂದು ಶೇ. 39ರಷ್ಟು ಮತಗಳೊಂದಿಗೆ 400ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದ ಕಾಂಗ್ರೆಸ್, ಇಂದು ಕೇವಲ ನಾಲ್ಕು ರಾಜ್ಯಗಳಿಗೆ ಸೀಮಿತವಾಗಿದೆ. ಮತದಾರರು ಅವರನ್ನು ಅಧಿಕಾರಕ್ಕೆ ಅರ್ಹರು ಎಂದು ಭಾವಿಸುತ್ತಿಲ್ಲ, ಇಲ್ಲಿ ಯಾವುದೇ ಮತಗಳ ಕಳ್ಳತನ ನಡೆದಿಲ್ಲ. ಕಳೆದ 40 ವರ್ಷಗಳಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಾದಂತೆಲ್ಲಾ ಕಾಂಗ್ರೆಸ್ ಅಳಿಯುತ್ತಾ ಬಂದಿದೆ. ಮೊದಲು ಮಿಲೇನಿಯಲ್ಸ್ (Millennials) ಅವರನ್ನು ತಿರಸ್ಕರಿಸಿದರು, ಈಗಿನ ಜೆನ್-ಜಿ (Gen-Z) ತಲೆಮಾರೂ ಸಹ ವಂಶಪಾರಂಪರ್ಯ ರಾಜಕಾರಣದ ಕ್ಲಬ್ ಆಗಿರುವ ಕಾಂಗ್ರೆಸ್ಗೆ ಪಾಠ ಕಲಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕಪ್ಪುಚುಕ್ಕೆ
ಇತ್ತೀಚೆಗೆ ನಡೆದ ‘ಎಐ ಶೃಂಗಸಭೆ’ (AI Summit)ಗೆ ನುಗ್ಗಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ ಮೋದಿ, ಇದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಆದರೆ ವಿದೇಶಿ ಅತಿಥಿಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ತನ್ನ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದರು. ಸೋಲಿನ ಹತಾಶೆ ಮತ್ತು ಅಹಂಕಾರ ತಲೆಗೇರಿದಾಗ ಇಂತಹ ಮನಸ್ಥಿತಿ ರೂಪುಗೊಳ್ಳುತ್ತದೆ. ದೇಶದ ಪ್ರತಿಷ್ಠೆಯನ್ನು ವಿದೇಶಿಯರ ಮುಂದೆ ಮಣ್ಣುಪಾಲು ಮಾಡಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಪ.ಬಂಗಾಳ, ತಮಿಳುನಾಡು ಸರ್ಕಾರಗಳ ವಿರುದ್ಧ ಕಿಡಿ
ಇದೇ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳ ವೈಫಲ್ಯಗಳ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, “ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿಲ್ಲ, ಇದರಿಂದ ಬಡವರು ತಮಗೆ ಸಿಗಬೇಕಾದ 5 ಲಕ್ಷ ರೂ.ವರೆಗಿನ ಉಚಿತ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ 9.5 ಲಕ್ಷ ಮನೆಗಳ ಪೈಕಿ 3 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಇದಕ್ಕೆ ಡಿಎಂಕೆ ಸರ್ಕಾರದ ಅಸಹಕಾರವೇ ಕಾರಣ. ವಿರೋಧ ಪಕ್ಷಗಳ ಪ್ರಾಮಾಣಿಕತೆಯ ಕೊರತೆಯಿಂದಾಗಿ ಬಡವರಿಗೆ ಸಿಗಬೇಕಾದ ಸೌಲಭ್ಯಗಳು ತಲುಪುತ್ತಿಲ್ಲ” ಎಂದು ಮೋದಿ ಆರೋಪಿಸಿದ್ದಾರೆ.
ಇದನ್ನೂ ಓದಿ : ರಣಜಿ ಫೈನಲ್.. ಪಂದ್ಯ ವೀಕ್ಷಿಸಲು ಹುಬ್ಬಳ್ಳಿಗೆ ಆಗಮಿಸಿದ ಜಮ್ಮು ಸಿಎಂ



















