ಹಾಸನ: ಪೊಲೀಸ್ ಸಿಬ್ಬಂದಿಯ ಮೀಟರ್ ಬಡ್ಡಿ ದಂಧೆಯ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ.
ಬಾಳ್ಳುಪೇಟೆಯ ಮೊಹಮದ್ ತನ್ಜೀರ್ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿರುವ ವ್ಯಕ್ತಿಯಾಗಿದ್ದು, 80 ಸಾವಿರಕ್ಕೆ 2 ಲಕ್ಷ ಬಡ್ಡಿ ಕಟ್ಟಿದ್ದರು. ಆದರೂ ಬಡ್ಡಿ ದಂಧೆಕೋರರು ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಎರಡು ವರ್ಷಗಳ ಹಿಂದೆ ಕೋಳಿ ಅಂಗಡಿ ಮಾಡುವ ಸಲುವಾಗಿ ತನ್ಜೀರ್ ನಗರದ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಹೆಡ್ ಕಾನ್ಸಟೆಬಲ್ ಅರುಣ್ ಎಂಬಾತನಿಂದ ಸಾಲ ಪಡೆದಿದ್ದ. ತಿಂಗಳಿಗೆ 28 ಸಾವಿರ ಬಡ್ಡಿ ಕಟ್ಟಿ ಆ ಹೈರಾಣಾಗಿದ್ದ. ಇವರಿಗೆ ಬಡ್ಡಿ ಕಟ್ಟುವ ಸಲುವಾಗಿ ವಕೀಲ ದುಶ್ಯಂತ್ ಸೇರಿ ಹಲವರಿಂದ ಮೀಟರ್ ಬಡ್ಡಿ ಸಾಲ ಪಡೆದಿದ್ದ ಎನ್ನಲಾಗಿದೆ.
ಒಟ್ಟು ಐದು ಲಕ್ಷ ಸಾಲ ಮಾಡಿದ್ದ ತನ್ಜೀರ್ ಎರಡು ವಾರದಿಂದ ಬಡ್ಡಿ ಕಟ್ಟದಿದ್ದಕ್ಕೆ ಸಾಲಗಾರರಿಂದ ತೀವ್ರ ಕಿರುಕುಳವನ್ನು ಅನುಭವಿಸಿದ್ದಾನೆ. ಇದರಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿ ಅಸ್ವಸ್ಥ ಗೊಂಡ ತನ್ಜೀರ್ ಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.