ಭೋಪಾಲ್: ಮಾನಸಿಕ ಅಸ್ವಸ್ಥ ಎಂದು ಹೇಳಲಾದ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ತಾಯಿ ಎದುರಿನಲ್ಲೇ 5 ವರ್ಷದ ಮಗುವಿನ ಶಿರಚ್ಛೇದ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
5 ವರ್ಷದ ಮಗು ವಿಕಾಸ್ ಮೃತ ದುರ್ದೈವಿ, ಮಹೇಶ್ (25) ಹತ್ಯೆಗೈದ ಆರೋಪಿ.
ಕೊಲೆಗಾರ ಅಪರಿಚಿತ ವ್ಯಕ್ತಿ, ಏಕಾಏಕಿ ಬೈಕ್ನಲ್ಲಿ ಬಂದು ಮನೆಯೊಳಕ್ಕೆ ನುಗ್ಗಿದವನು, ಸಲಾಕೆ ತೆಗದುಕೊಂಡು ಮಗುವಿನ ತಲೆಗೆ ರಪ್ಪನೆ ಬಡಿದಿದ್ದಾನೆ, ಅಷ್ಟಕ್ಕೆ ಸುಮ್ಮನಾಗದೇ ಮಗುವಿನ ಗುತ್ತಿಗೆ ಹಿಡಿದು ತಲೆಯನ್ನು ಕತ್ತರಿಸಿದ್ದಾನೆ. ಮಗುವಿನ ಮೇಲೆ ಹಲ್ಲೆ ತಡೆಯಲು ಬಂದ ಪೋಷಕರ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಬಳಿಕ ಪೋಷಕರ ಚೀರಾಟ ಕೇಳಿ ನೆರೆಹೊರೆಯವರು ಮನೆಯೊಳಗೆ ಧಾವಿಸಿದ್ದಾರೆ. ಕೃತ್ಯ ಕಂಡು ಗ್ರಾಮಸ್ಥರು ಆರೋಪಿಯನ್ನು ಚೆನ್ನಾಗಿ ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಥಳಿತದಿಂದ ಗಂಭೀರವಾದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.
ಈ ಕುರಿತು ಧಾರ್ ಪೊಲೀಸ್ ವರಿಷ್ಠಾಧಿಕಾರಿ ಮಾಯಾಂಕ್ ಅವಸ್ಥಿ ಮಾತನಾಡಿ, ಇದು ಅತ್ಯಂತ ಹೃದಯ ವಿದ್ರಾವಕ ಘಟನೆ. ಗ್ರಾಮಸ್ಥರು ಕ್ರೋಧಗೊಂಡಿದ್ದರಿಂದ ಪೊಲೀಸರು ಬರುವ ಮೊದಲೇ ಆರೋಪಿಗೆ ಥಳಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಆತ ಸಾವನ್ನಪ್ಪಿದ್ದಾನೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಆರೋಪಿ ಮಹೇಶ್ ಅಲಿರಾಜ್ಪುರ ಜಿಲ್ಲೆಯ ಜೋಬತ್ ಬಾಗ್ಡಿ ಗ್ರಾಮದ ನಿವಾಸಿ, ಮಗು ಕೊಂದಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಆತನ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕಿದೆ. ಈ ನಡುವೆ ಮಹೇಶ್ ಮಾನಸಿಕ ಅಸ್ವಸ್ಥನಾಗಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.